ಪುತ್ತಿಲ, ಸತ್ಯಜಿತ್ ಸುರತ್ಕಲ್ ಸ್ಪರ್ಧೆಗೆ ಬ್ರೇಕ್ ಹಾಕುತ್ತಾ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್? – ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯೋ ಬಿಜೆಪಿ ಪ್ಲ್ಯಾನ್ ಗೆ ಚೌಟಾ ಅವರೇ ಟ್ರಂಪ್ ಕಾರ್ಡ್…!!
- ರಾಜಕೀಯ
- March 14, 2024
- No Comment
- 2390
ನ್ಯೂಸ್ ಆ್ಯರೋ : ಬಹುದಿನಗಳ ಕರಾವಳಿ ನಗರಿ ಮಂಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತರ ಹಾಗೂ ಬಿಜೆಪಿ ಬೆಂಬಲಿಗರ ಮುಖದಲ್ಲಿ ಕೊಂಚ ಮಟ್ಟಿಗಿನ ಕೋಪ ಶಮನವಾಗಿದೆ. ಬಿಜೆಪಿ ಪಕ್ಷದ ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲು ಮೇಲಿದ್ದ ಕಾರ್ಯಕರ್ತರ ಅಸಹನೆ ಕಟ್ಟೆ ಒಡೆಯುವ ಮುನ್ನವೇ ಬಿಜೆಪಿ ಎಚ್ಚೆತ್ತು 42ರ ಹರೆಯದ ಭೂಸೇನೆಯ ಮಾಜಿ ಅಧಿಕಾರಿ ಕ್ಯಾ| ಬೃಜೇಶ್ ಚೌಟ ಅವರನ್ನು ದ.ಕ. ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಹೈಕಮಾಂಡ್ ನ ಜಾಣ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಅದಕ್ಕೂ ಮಿಗಿಲಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಬಿಜೆಪಿ ಹೈಕಮಾಂಡ್ ತಂತ್ರ ಬಹುಪಾಲು ಫಲ ನೀಡಿದೆ ಎನ್ನಲಾಗುತ್ತಿದೆ.
ಕ್ಯಾ. ಬ್ರಿಜೇಶ್ ಚೌಟಾಗೆ ಟಿಕೆಟ್, ಮೆತ್ತಗಾದ ಪುತ್ತಿಲ ಪರಿವಾರ..!!
ಸಹಜವಾಗಿಯೇ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು “ಪುತ್ತಿಲ ಪರಿವಾರ” ಎಂಬ ಹೊಸ ಸಂಘಟನೆಯ ಉದಯಕ್ಕೆ ಕಾರಣವಾಗಿದ್ದರು. ಪುತ್ತಿಲ ಅವರಿಗೆ ಟಿಕೆಟ್ ಕೈತಪ್ಪಲು ನಳಿನ್ ನೇರ ಕಾರಣ ಎಂಬುದು ಪುತ್ತಿಲ ಬೆಂಬಲಿಗರ ವಾದವಾಗಿತ್ತು. ಬಿಜೆಪಿ ಪಕ್ಷದ ಆಂತರಿಕ ಮಾಹಿತಿ ಪ್ರಕಾರ ಬಿಜೆಪಿ ಪಕ್ಷದಲ್ಲಿ ಸ್ಥಾನಮಾನವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡೋದು ಸರಿ ಅಲ್ಲ ಎಂಬ ಕಾರಣಕ್ಕೆ ಪುತ್ತಿಲ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎನ್ನುವ ವಾದ ಇದೆಯಾದರೂ ಪುತ್ತಿಲ ಒಬ್ಬ ಸಮರ್ಥ ಅಭ್ಯರ್ಥಿಯಾಗಿದ್ದರು ಎನ್ನುವುದಕ್ಕೆ ಅವರು ಪಡೆದ ಮತಗಳೇ ಸಾಕ್ಷಿಯಾಗಿತ್ತು. ಆದರೂ ಬಿಜೆಪಿ ಗೆಲ್ಲಬೇಕಾಗಿದ್ದ ಕ್ಷೇತ್ರವನ್ನು ತನ್ನ ಕೈಯ್ಯಾರೆ ಕಾಂಗ್ರೆಸ್ ಗೆ ನೀಡಿ ಬಲವಾದ ಪೆಟ್ಟು ತಿಂದಿತು.
ಕೆಲದಿನಗಳ ಹಿಂದೆಯೂ ಮತ್ತೆ ಪುತ್ತಿಲ ಅವರಿಗೆ ಬಿಜೆಪಿ ಪಕ್ಷದಲ್ಲಿ ಸ್ಥಾನ ಮಾನ ನೀಡುವ ಸಲುವಾಗಿ ಬಿಜೆಪಿ ಪಕ್ಷಕ್ಕೆ ಗಡುವು ನೀಡುವ ಮೂಲಕ ಪುತ್ತಿಲ ಪರಿವಾರ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಬೆಂಬಲಿಗರ ತುರ್ತು ಸಭೆ ಕರೆದ ಪುತ್ತಿಲ ಪರಿವಾರ ಅರುಣ್ ಕುಮಾರ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರಿಗೆ ಸ್ಥಾನ ಮಾನ ನೀಡುವ ಬಗ್ಗೆಯೂ ಯೋಚಿಸುವಂತೆ ಗಡುವು ನೀಡಿದ್ದು ಬಿಜೆಪಿ ಪಕ್ಷಕ್ಕೂ ತೀವ್ರ ಮುಜುಗರ ಉಂಟು ಮಾಡಿತ್ತು. ರಾಷ್ಟ್ರೀಯ ಪಕ್ಷವೊಂದಕ್ಕೆ ಗಡುವು ನೀಡುವ ಮೂಲಕ ಸೆಡ್ಡು ಹೊಡೆಯಲು ಪುತ್ತಿಲ ಪರಿವಾರ ತೀರ್ಮಾನಿಸಿದ್ದು ಬಿಜೆಪಿ ಹೈಕಮಾಂಡ್ ಗೂ ಇರಿಸುಮುರಿಸು ತಂದಿದ್ದು ಸುಳ್ಳಲ್ಲ.
ಮುಗಿದ ಗಡುವು ಅವಧಿ, ಪುತ್ತಿಲ ಲೋಕಸಭಾ ಚುನಾವಣೆಗೆ ಪಕ್ಷೇತರ ಸ್ಪರ್ಧೆ ಘೋಷಣೆ
ಪುತ್ತಿಲ ಪರಿವಾರದ ಗಡುವು ಅವಧಿ ಮುಗಿದ ಬಳಿಕ ಮತ್ತೆ ಸಭೆ ನಡೆಸಿದ ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿತು. ಪುತ್ತಿಲ ಪರಿವಾರದ ಆರಂಭದಿಂದಲೂ ಜೊತೆಗಿದ್ದ ಕಲ್ಮಡ್ಕದ ರಾಜಾರಾಮ್ ಭಟ್ ಅವರು ಪುತ್ತಿಲ ಅವರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದರಾದರೂ ಅವರು ಸದ್ಯ ಪುತ್ತಿಲ ಪರಿವಾರಕ್ಕೆ ಗುಡ್ ಬೈ ಹೇಳಿ ಕೆಲದಿನಗಳೇ ಕಳೆದಿದೆ. ಅರುಣ್ ಕುಮಾರ್ ಅವರ ವಿಧಾನಸಭಾ ಚುನಾವಣೆಯ ವೇಳೆ ಜೊತೆಗಿದ್ದ ಹಿರಿತಲೆಗಳ ಪೈಕಿ ಕೆಲವರು ಪರಿವಾರದಿಂದ ಹಿಂದೆ ಸರಿಯಲು ಆರಂಭಿಸಿದ್ದು ಪುತ್ತಿಲ ಪರಿವಾರಕ್ಕೂ ಚಿಂತೆ ಹೆಚ್ಚಿಸಿದೆ.
ಸದ್ಯ ಪುತ್ತಿಲ ಪರಿವಾರದ ಮುಂದಿನ ನಡೆ ಬಗ್ಗೆ ಹಲವು ಚರ್ಚೆಗಳು ಕರಾವಳಿಯಲ್ಲಿ ಚರ್ಚೆಯಾಗುತ್ತಿದ್ದರೂ ಸದ್ಯ ಬಂಡಾಯ ಅಭ್ಯರ್ಥಿಯಾದರೆ ವೋಟ್ ಲೆಕ್ಕಾಚಾರದಲ್ಲಿ ಪುತ್ತಿಲ ಅವರು ಒಂದು ಹೆಜ್ಜೆ ಹಿಂದೆಯೇ ಉಳಿದುಬಿಡುವ ಆತಂಕವೂ ಪುತ್ತಿಲ ಪರಿವಾರಕ್ಕೆ ಇದೆ.. ಕಾರಣ ನಳಿನ್ ಗೆ ಟಿಕೆಟ್ ಕೈತಪ್ಪಿರುವುದು ಒಂದು ಕಾರಣವಾದರೆ ಸದ್ಯದ ಅಭ್ಯರ್ಥಿ ಬ್ರಿಜೇಶ್ ಚೌಟಾ ಅವರು ಅಜಾತಶತ್ರುವಾಗಿರುವ ಕಾರಣ ಬಿಜೆಪಿ ಬೆಂಬಲಿಗರಿಗೂ ಅವರ ಬಗ್ಗೆ ನೆಗೆಟಿವ್ ಥಿಂಕಿಂಗ್ ಗಳಿಲ್ಲ…!!
ಸತ್ಯಜಿತ್ ಸುರತ್ಕಲ್ ಗೂ ಬಿಸಿತುಪ್ಪವಾಗ್ತಾರಾ ಚೌಟಾ?
ತಾನೂ ಕೂಡ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ, ನಳಿನ್ ವಿರುದ್ಧ ನನ್ನ ಸ್ಪರ್ಧೆ ಖಚಿತ ಎನ್ನುತ್ತಿದ್ದ ಸತ್ಯಜಿತ್ ಸುರತ್ಕಲ್ ಅವರಿಗೂ ಚೌಟಾ ಆಯ್ಕೆ ಹಿನ್ನಡೆ ಉಂಟುಮಾಡಿದೆ. ಕರಾವಳಿಯ ಪ್ರಬಲ ಬಿಲ್ಲವ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಗುರುತಿಸಲ್ಪಡುತ್ತಿರುವ ಸತ್ಯಜಿತ್ ಅವರ ನಾಯಕತ್ವದ ಬಗ್ಗೆ ಯಾರಿಗೂ ಅನುಮಾನ ಇಲ್ಲ.. ಆದರೆ ಕೇವಲ ಜಾತೀಯ ರಾಜಕಾರಣ ಇನ್ನೂ ಕರಾವಳಿಯಲ್ಲಿ ಬೆಳೆದಿಲ್ಲ..!!
ಉತ್ತರ ಕರ್ನಾಟಕ ಭಾಗ ಇಲ್ಲವೇ ಹಳೆ ಮೈಸೂರು ಭಾಗಗಳಂತೆ ಜಾತಿ ಸಮೀಕರಣದ ಆಧಾರದಲ್ಲಿ ಪಕ್ಷಗಳು ಟಿಕೆಟ್ ನೀಡೋದಿಲ್ಲ.. ಅದೇ ಕಾರಣಕ್ಕೆ ಪ್ರಬಲ ಬಿಲ್ಲವ ಸಮಯದಾಯದವರಾದರೂ ಸತ್ಯಜಿತ್ ಅವರನ್ನು ಬಿಜೆಪಿ ಪಕ್ಷ ಗುರುತಿಸುವ ಪ್ರಯತ್ನ ಮಾಡಿಲ್ಲ. ಆದರೂ ಅವರು ರಾಜಕೀಯವಾಗಿ ಬೆಳೆಯವ ಮುನ್ನವೇ ಅವರ ಬಲ ಕುಗ್ಗಿಸಿದ್ದು ಮಾತ್ರ ಸೋಕಾಲ್ಡ್ ಪರಿವಾರದ ಹಿರಿತಲೆಗಳು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ.. ಒಟ್ಟಿನಲ್ಲಿ ಈ ಬಾರಿಯೂ ಕೂಡ ಸತ್ಯಜಿತ್ ಅವರ ಸ್ಪರ್ಧೆ ಸದ್ಯದ ಮಟ್ಟಿಗೆ ಹೇಳುವುದಾದರೆ ಅನುಮಾನವೆಂದೇ ಹೇಳಬಹುದು..!!
ಅಭ್ಯರ್ಥಿಯ ಆಯ್ಕೆ, ಮಾನದಂಡ ಎಲ್ಲವನ್ನೂ ಅಳೆದು ತೂಗಿ ನೋಡಿದಾಗ ನಳಿನ್ ಗೆ ಇದ್ದ ಆಡಳಿತವಿರೋಧಿ ಅಲೆ, ಸಾಮಾಜಿಕ ಜಾಲತಾಣಗಳ ಕ್ಯಾಂಪೇನ್ ಗಳು ಹೈಕಮಾಂಡ್ ಮಟ್ಟದಲ್ಲೂ ಚಿಂತನೆಗೆ ಕಾರಣವಾಗಿದ್ದು ನಿಜವಾಗಿದೆ. ಅತ್ತ ಪುತ್ತಿಲ ಪರಿವಾರದ ಬೆದರಿಕೆಗೂ ಬಗ್ಗದೇ ಇತ್ತ ಸತ್ಯಜಿತ್ ಅವರ ಸಮುದಾಯದ ವಿರೋಧವನ್ನೂ ಕಟ್ಟಿಕೊಳ್ಳದಂತೆ ಬ್ರಿಜೇಶ್ ಚೌಟ ಅವರಂಥ ಮಾಜಿ ಸೈನಿಕನನ್ನು ಅಭ್ಯರ್ಥಿಯಾಗಿಸಿ ಎಲ್ಲರ ಬಾಯಿ ಮುಚ್ಚಿಸಿದ್ದು ಬಿಜೆಪಿ ಹೈಕಮಾಂಡ್ ನ ಜಾಣತನಕ್ಕೆ ಸಾಕ್ಷಿ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಘಟನಾ ಶಕ್ತಿಗೆ ಸರಿಸಮನಾದ ಪಕ್ಷ ಇಲ್ಲದೇ ಇದ್ದರೂ ಯಾಮಾರುವಂತಿಲ್ಲ… ಒನ್ ಸೈಡ್ ಮ್ಯಾಚ್ ಆಗುವ ಬದಲು ಅಲ್ಪ ಮಟ್ಟಿನ ಹೋರಾಟಕ್ಕೆ ಕಾಂಗ್ರೆಸ್ ಕೂಡ ಅಣಿಯಾಗುವ ನಿರೀಕ್ಷೆ ಇದೆ…