
ಮೈದಾನವಿಲ್ಲದೆ ಶಾಲೆಯನ್ನು ನಿರ್ಮಿಸಲು ಅವಕಾಶವಿಲ್ಲ ಎಂದ ಸುಪ್ರೀಂ ಕೋರ್ಟ್ – ಹೈಕೋರ್ಟ್ ಆದೇಶಕ್ಕೆ ಕೆಂಡಾಮಂಡಲ…!!
- ರಾಷ್ಟ್ರೀಯ ಸುದ್ದಿ
- March 8, 2023
- No Comment
- 96
ನ್ಯೂಸ್ ಆ್ಯರೋ : ಶಾಲೆಯ ಮೂಲಸೌಕರ್ಯಗಳಲ್ಲಿ ಒಂದಾದ ಆಟದ ಮೈದಾನವಿಲ್ಲದೇ ಯಾವುದೇ ಶಾಲೆ ನಿರ್ಮಿಸುವಂತಿಲ್ಲ, ಈ ಶಾಲೆಯಲ್ಲಿ ಓದುವ ಮಕ್ಕಳೂ ಉತ್ತಮ ಪರಿಸರಕ್ಕೆ ಅರ್ಹರಾಗಿರುತ್ತಾರೆ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹರಿಯಾಣದ ಯಮುನಾನಗರದಲ್ಲಿ ಶಾಲೆಯ ಆಟದ ಮೈದಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಕುರಿತು ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಈ ಮೂಲಕ ಭೂಮಿಯನ್ನು ತೆರವುಗೊಳಿಸಿ ಶಾಲೆಗೆ ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಮೈದಾನದ ಜಾಗಕ್ಕೆ ಮಾರುಕಟ್ಟೆ ಬೆಲೆ ವಿಧಿಸುವ ಮೂಲಕ ಅಕ್ರಮ ಭೂಸ್ವಾಧೀನವನ್ನು ಸಕ್ರಮಗೊಳಿಸುವಂತೆ ನಿರ್ದೇಶಿಸುವ ಮೂಲಕ ಹೈಕೋರ್ಟ್ ದೊಡ್ಡ ತಪ್ಪು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮೈದಾನದ ಜಾಗ ಒತ್ತುವರಿ ಮಾಡಿಕೊಂಡಿರುವವರು ಹಸ್ತಾಂತರಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ಮಾರ್ಚ್ 3ರಂದು ಈ ನಿರ್ಧಾರ ನೀಡಿತು.
ಭಗವಾನಪುರ ಗ್ರಾಮದ ಶಾಲಾ ಜಮೀನಿನ ಒತ್ತುವರಿಯನ್ನು ಸಕ್ರಮಗೊಳಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದರೊಂದಿಗೆ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಜಮೀನಿಗೆ ಹಣ ಪಡೆದು ಶಾಲೆಯ ಆಟದ ಮೈದಾನಕ್ಕೆ ಪರ್ಯಾಯ ಜಾಗ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಅನಧಿಕೃತ ಒತ್ತುವರಿದಾರರ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿತ್ತು, ಆದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೈಕೋರ್ಟ್ ಆದೇಶ ತಪ್ಪು ಎಂದು ಹೇಳಿದ್ದು, ಸ್ಥಳದ ನಕ್ಷೆಗಳು ಮತ್ತು ರೇಖಾಚಿತ್ರಗಳನ್ನು ನೋಡಿದ ನಂತರ ಅದು ಕಂಡುಬಂದಿದೆ. ಹೈಕೋರ್ಟ್ ನೀಡಿದ ಸೂಚನೆಗಳು ಅನ್ವಯವಾಗುವುದಿಲ್ಲ.
ಕೆಳಹಂತದ ಅಧಿಕಾರಿಗಳ ಆದೇಶಗಳು, ಹೈಕೋರ್ಟ್ನ ಆದೇಶ ಮತ್ತು ಹೊಸದಾಗಿ ಮಾಡಲಾದ ಗಡಿ ಗುರುತಿಸುವಿಕೆಯನ್ನ ಗಮನಿಸಿದರೆ, ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಮೂಲ ಅರ್ಜಿದಾರರು ಆ ಭೂಮಿಯನ್ನ ಅಕ್ರಮವಾಗಿ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ವಿವಾದವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಆಟದ ಮೈದಾನವಿಲ್ಲ ಮತ್ತು ಶಾಲೆಯ ಸುತ್ತಲೂ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಿದೆ ಅನ್ನೋದನ್ನ ನ್ಯಾಯ ಪೀಠ ಗಮನಿಸಿದೆ.
ಶಾಲೆ ಮತ್ತು ಶಾಲೆಯ ಆಟದ ಮೈದಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನ ಅಕ್ರಮವಾಗಿ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಆ ಭೂಮಿಯನ್ನ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಟದ ಮೈದಾನವಿಲ್ಲದೇ ಯಾವುದೇ ಶಾಲೆ ಇರಲು ಸಾಧ್ಯವಿಲ್ಲ. ಆ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳೂ ಉತ್ತಮ ಪರಿಸರಕ್ಕೆ ಅರ್ಹರು ಎಂದಿದೆ.