Sad News : ಭಾರತೀಯ ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ – ವೀರಮರಣ ಅಪ್ಪಿದ ಮಂಗಳೂರು ಮೂಲದ ಪ್ರಾಂಜಲ್..!
- ರಾಷ್ಟ್ರೀಯ ಸುದ್ದಿ
- November 23, 2023
- No Comment
- 138
ನ್ಯೂಸ್ ಆ್ಯರೋ : ಜಮ್ಮು – ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
28ರ ಹರೆಯದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಮಂಗಳೂರಿನಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಭಾರತೀಯ ಸೇನಾಪಡೆಯನ್ನು ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಂಜಲ್ ಮಂಗಳೂರಿನ ಎಂಆರ್ ಪಿಎಲ್ ನಿವೃತ್ತ ಎಂಡಿ ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ.
ಎಂಆರ್ ಪಿಎಲ್ ಡೆಲ್ಲಿ ಸ್ಕೂಲ್ ನಲ್ಲಿ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದು ಇವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.
ಬುಧವಾರ ಬೆಳಗ್ಗೆ ಜಮ್ಮು – ಕಾಶ್ಮೀರದ ರಜೇರಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಪ್ರಾಂಜಲ್ ರೊಂದಿಗೆ 9ಪಿಎಆರ್ ಎ ಕ್ಯಾಪ್ಟನ್ ಶುಭಂ, ಮತ್ತು ಹವಾಲ್ದಾರ್ ಮಜೀದ್ ಮೃತರಾಗಿದ್ದಾರೆ.
ಐದರಿಂದ ಆರು ಮಂದಿಯ ಉಗ್ರರ ಗುಂಪು ದಾಳಿ ಮಾಡಿತ್ತು. ಈ ಉಗ್ರರ ಬೇಟೆಗೆ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಪ್ರಾಂಜಲ್ ಸಾವಿನ ಹಿನ್ನಲೆ ಎಂಆರ್ ಪಿ ಎಲ್ ಡೆಲ್ಲಿ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿದೆ.
ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಅವಿಭಜಿತ ದಕ್ಷಿಣ ಕನ್ನಡದವರು, ಮೇ.31ರಂದು ಎಂಆರ್ ಪಿಎಲ್ ನ ಎಂಡಿ ಪದವಿಯಿಂದ ನಿವೃತ್ತರಾಗಿದ್ದರು. ಇವರ ನಿವೃತ್ತಿ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ಸದ್ಯ ವೆಂಕಟೇಶ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪ್ರಾಂಜಲ್ ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ.