ಮಣಿಪುರ ಮತ್ತೆ ಉದ್ವಿಗ್ನ, ಭೀಕರ ಹಿಂಸಾಚಾರ – ಹಲವೆಡೆ ಕರ್ಫ್ಯೂ ಜಾರಿ, ಸೇನೆಯ ನಿಯೋಜನೆ
- ರಾಷ್ಟ್ರೀಯ ಸುದ್ದಿ
- May 23, 2023
- No Comment
- 157
ನ್ಯೂಸ್ ಆ್ಯರೋ : ಭಾರೀ ಪ್ರಮಾಣದ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೋಮವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇಂಫಾಲ್ನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ವರದಿಗಳ ನಂತರ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.
ಇಂಫಾಲ್ನ ನ್ಯೂ ಚೆಕಾನ್ ಪ್ರದೇಶದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳು ಮುಖಾಮುಖಿಯಾದ ನಂತರ ಕರ್ಫ್ಯೂ ಅನ್ನು ಪುನಃ ಹೇರಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ಕರೆಸಲಾಗಿದೆ ಎಂದು ವರದಿ ಹೇಳಿದೆ.
ರಾಷ್ಟ್ರೀಯ ಟಿವಿ ಮಾಧ್ಯಮಗಳ ವರದಿಗಳ ಪ್ರಕಾರ ಹಿಂದಿನ ಹಿಂಸಾಚಾರದ ನಂತರ ಜನರು ಖಾಲಿ ಮಾಡಿದ ಮನೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ಕೆಲವು ಮನೆಗಳಿಗೆ ಮತ್ತೆ ಬೆಂಕಿ ಹಚ್ಚಲಾಗಿದೆ.
ಮಣಿಪುರ ಕಳೆದ ಒಂದು ತಿಂಗಳಿಗೂ ಹೆಚ್ಚು ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿತ್ತು. ಮೇ 3ರಂದು ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಾಗಿ ಪ್ರತಿಭಟಿಸಲು ಬುಡಕಟ್ಟು ಜನಾಂಗದವರು ಒಗ್ಗಟ್ಟಿನ ಮೆರವಣಿಗೆಯನ್ನು ಆಯೋಜಿಸಿದ ನಂತರ ಗುಡ್ಡಗಾಡು ರಾಜ್ಯದಲ್ಲಿ ಘರ್ಷಣೆಗಳು ಪ್ರಾರಂಭವಾದವು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಸುಟ್ಟುಹಾಕಲಾಯಿತು ಮತ್ತು ಸರಕಾರ-ಸಂಘಟಿತ ಶಿಬಿರಗಳಿಗೆ ತೆರಳಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.
ಮೀಸಲು ಅರಣ್ಯ ಭೂಮಿಯಿಂದ ಕುಕಿ ಗ್ರಾಮಸ್ಥರನ್ನು ಹೊರಹಾಕುವ ಬಗ್ಗೆ ಘರ್ಷಣೆಗಳು ನಡೆದು, ಒಂದು ಸಣ್ಣ ಆಂದೋಲದಿಂದ ಆರಂಭವಾಗಿ ದೊಡ್ಡ ಗಲಾಟೆ ಹೊತ್ತಿಕೊಂಡಿತ್ತು. ಇದೀಗ ರಾಜ್ಯಾದ್ಯಂತ ಇದು ಕಾಡ್ಗಿಚ್ಚಿನಂತೆ ಹಬ್ಬಿದೆ.