Kejriwal Arrest : ದೆಹಲಿ ಮದ್ಯ ಹಗರಣ ಪ್ರಕರಣ – ಇಡಿ ಅಧಿಕಾರಿಗಳಿಂದ ದೆಹಲಿ ಸಿಎಂ ಕೇಜ್ರಿವಾಲ್ ಬಂಧನ
- ರಾಷ್ಟ್ರೀಯ ಸುದ್ದಿ
- March 21, 2024
- No Comment
- 1773
ನ್ಯೂಸ್ ಆ್ಯರೋ : ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇಡಿ ತನ್ನನ್ನು ಬಂಧಿಸದಂತೆ ಕೋರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಕೇಜ್ರಿವಾಲ್ ಮನೆಗೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ತಂಡ ಎರಡು ಗಂಟೆಗಳ ವಿಚಾರಣೆ ಬಳಿಕ ಬಂಧಿಸಿದೆ.
ಗುರುವಾರ ಇಡಿ ಮುಂದೆ ಹಾಜರಾಗುವಂತೆ ಇಡಿ ಒಂಬತ್ತನೇ ಬಾರಿಗೆ ಸಮನ್ಸ್ ಕಳುಹಿಸಿದ ನಂತರ ಕೇಜ್ರಿವಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಮನ್ಸ್ ಅಕ್ರಮವಾಗಿದೆ ಎಂದು ಉಲ್ಲೇಖಿಸಿ ಅವರು ಇಡಿ ಮುಂದೆ ನಿರಂತರವಾಗಿ ಹಾಜರಾಗಿರಲಿಲ್ಲ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ದೆಹಲಿ ಹೈಕೋರ್ಟ್ ಪೀಠವು ಕೇಜ್ರಿವಾಲ್ಗೆ ಬಲವಂತದ ಕ್ರಮದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿತ್ತು. ಆದರೆ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿತ್ತು. ಇದರ ನಡುವೆ ಹಠಾತ್ ಬೆಳವಣಿಗೆ ನಡೆದಿದೆ.
ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ಗಳಲ್ಲಿ ಕೇಜ್ರಿವಾಲ್ ಹೆಸರನ್ನು ಹಲವು ಬಾರಿ ಉಲ್ಲೇಖಿಸಲಾಗಿದೆ. ಅಬಕಾರಿ ನೀತಿಯನ್ನು ರೂಪಿಸಲು ಆರೋಪಿಗಳು ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು, ಇದರಿಂದಾಗಿ ಅವರಿಗೆ ಅನಪೇಕ್ಷಿತ ಲಾಭಗಳು ಉಂಟಾಗಿವೆ. ಅವರು ಎಎಪಿಗೆ ಕಿಕ್ಬ್ಯಾಕ್ ಪಾವತಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಇತ್ತೀಚೆಗಷ್ಟೇ ಮದ್ಯ ಹಗರಣ ಪ್ರಕರಣದಲ್ಲಿ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರನ್ನು ಇಡಿ ಬಂಧಿಸಿತ್ತು. ಪ್ರಸ್ತುತ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕವಿತಾ ಅವರಂತಹ ಅನೇಕ ನಾಯಕರು ಈ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.