Aaradhya Rai Bacchan : ಯೂಟ್ಯೂಬ್ ಚಾನೆಲ್ ಗಳ ವಿರುದ್ಧದ ಹೋರಾಟದಲ್ಲಿ ಆರಾಧ್ಯ ಬಚ್ಚನ್ ಗೆಲುವು – ಐಶ್, ಅಭಿ ಪುತ್ರಿ ಕೋರ್ಟ್ ಮೆಟ್ಟಿಲು ಹತ್ತಿದ್ದೇಕೆ?
- ಮನರಂಜನೆ
- April 21, 2023
- No Comment
- 358
ನ್ಯೂಸ್ ಆ್ಯರೋ : ವಿಶ್ವಸುಂದರಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ದಂಪತಿಗಳ ಪುತ್ರಿ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಯೂಟ್ಯೂಬ್ ಚಾನೆಲ್ಗಳಿಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ಸುಳ್ಸುದ್ದಿ ಪ್ರಕಟಿಸಿದ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದ ಆರಾಧ್ಯ ರೈ ಬಚ್ಚನ್ಗೆ ಈ ಮೂಲಕ ಗೆಲುವು ದೊರೆತಿದೆ. ಆರಾಧ್ಯ ಆರೋಗ್ಯ ಕುರಿತು ಸುಳ್ಳು ಮಾಹಿತಿ ಪ್ರಕಟಿಸದಂತೆ ಹೈಕೋರ್ಟ್ ಯೂಟ್ಯೂಬ್ ಚಾನೆಲ್ಗಳಿಗೆ ಎಚ್ಚರಿಕೆ ನೀಡಿದೆ.
ಆರಾಧ್ಯ ದಾಖಲಿಸಿದ್ದ ಕೇಸ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿ ಶಂಕರ್, ಯಾವುದೇ ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು ಅಸ್ವಸ್ಥ ವಿಕೃತತೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಆರಾಧ್ಯ ಬಗ್ಗೆ ಪ್ರಸಾರ ಮಾಡಲಾದ ಅಂತಹ ವಿಡಿಯೋಗಳನ್ನು ತೆಗೆದುಹಾಕುವಂತೆ ಗೂಗಲ್ಗೆ ಸೂಚಿಸಲಾಗಿದೆ.
ಪ್ರತಿಯೊಂದು ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕೋರ್ಟ್ ಸೂಚಿಸಿದೆ. ಆರಾಧ್ಯ ಜೊತೆಗೆ ತಂದೆ ಅಭಿಷೇಕ್ ಬಚ್ಚನ್ ಕೋರ್ಟ್ಗೆ ತೆರಳಿದ್ದರು. ಯೂಟ್ಯೂಬ್ ಚಾನೆಲ್ಗಳಿಂದ ಆರಾಧ್ಯ ವಿಡಿಯೋಗಳನ್ನು ತೆಗೆಯಲು ಸೂಚಿಸುತ್ತಿದ್ದಂತೆ ಐಶ್ವರ್ಯ-ಅಭಿಷೇಕ್ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಯಾವುದೇ ಸೆಲೆಬ್ರಿಟಿಗಳ ವಿರುದ್ಧ, ಯಾವುದೇ ವ್ಯಕ್ತಿಗಳ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡುವ ಯೂಟ್ಯೂಬ್ಗಳಿಗೆ ಇದೊಂದು ಪಾಠ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ಆರಾಧ್ಯ ಕೋರ್ಟ್ ಮೆಟ್ಟಿಲು ಏರಿದ್ಯಾಕೆ?
ಐಶ್ವರ್ಯ ಪುತ್ರಿ ಆರಾಧ್ಯ ಬಚ್ಚನ್, ನಡೆಯುವ ರೀತಿ ಹಾಗೂ ಮಾತನಾಡುವ ಶೈಲಿಯನ್ನು ಕೆಲವೊಂದು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗಿತ್ತು. ಆರಾಧ್ಯ ಆರೋಗ್ಯ ಸರಿ ಇಲ್ಲ ಎಂದು ಕೆಲವು ಚಾನೆಲ್ಗಳು ಸುಳ್ಳು ಮಾಹಿತಿ ಪ್ರಕಟಿಸಿದ್ದವು. ಐಶ್ವರ್ಯ ಯಾವಾಗಲೂ ಮಗಳು ಆರಾಧ್ಯಳನ್ನು ಎಲ್ಲಿ ಹೋದರೂ ಜೊತೆಗೆ ಕರೆದೊಯ್ಯುತ್ತಾರೆ. ಮಗಳ ಸ್ಕೂಲ್, ವಿದ್ಯಾಭ್ಯಾಸದ ಕಥೆ ಏನು? ತಾಯಿಯ ಜೊತೆ ಹೋಗುವಾಗಲೆಲ್ಲಾ ಆರಾಧ್ಯ ಅಮ್ಮನ ಕೈ ಹಿಡಿದಿರುತ್ತಾಳೆ, ಆಕೆ ಇನ್ನು ಪುಟ್ಟ ಮಗುನಾ? ಎಂದೆಲ್ಲಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಆಗ ಐಶ್ವರ್ಯ ರೈ ಪ್ರತಿಕ್ರಿಯಿಸಿ ಇದು ನಮ್ಮ ವೈಯಕ್ತಿಕ ವಿಚಾರ. ತಂದೆ-ತಾಯಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ವಿಚಾರ ಗೊತ್ತಿರುತ್ತದೆ, ನಮಗೂ ಜವಾಬ್ದಾರಿ ಇದೆ ಎಂದಿದ್ದರು.