Mangalore : ಹರೇಕಳ ಕಡವಿನಬಳಿ ಅಂಗಡಿಯ ದರೋಡೆ, ಕೊಲೆಯತ್ನ ಪ್ರಕರಣ – ಏಳು ವರ್ಷಗಳ ಬಳಿಕ ಆರೋಪಿಯ ಸೆರೆ
- ಕ್ರೈಂ ಸುದ್ದಿ
- March 20, 2024
- No Comment
- 422
ನ್ಯೂಸ್ ಆ್ಯರೋ : ದರೋಡೆ ಮತ್ತು ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಳ್ಳಾಲ ಉಳಿಯ ನಿವಾಸಿ ರಾಜೇಶ್ ಸುವರ್ಣ (24) ಎಂಬ ಆರೋಪಿಯನ್ನು ಎಸಿಪಿ ಧನ್ಯಾ ನಾಯಕ್ ನೇತೃತ್ವದ ಮಾದಕದ್ರವ್ಯ ವಿರೋಧಿ ಪೊಲೀಸ್ ತಂಡ ಬಂಧಿಸಿದೆ.
ಹರೇಕಳ ಕಡವಿನಬಳಿಯ ಎನ್. ಎಫ್. ಜನರಲ್ ಸ್ಟೋರ್ ಮಾಲಕ ಅಬ್ದುಲ್ ರಹಿಮಾನ್ ಅವರ ಮೇಲೆ 2017ರ ಮೇ 24ರಂದು ರಿಕ್ಷಾದಲ್ಲಿ ಬಂದಿದ್ದ ಅಶ್ರಫ್ ಮತ್ತು ಮೂವರು ಸೇರಿ ರಾತ್ರಿ 10ಕ್ಕೆ ಅಂಗಡಿಯೊಳಕ್ಕೆ ನುಗ್ಗಿ ತಲವಾರು ತೋರಿಸಿ ಪೊಲೀಸರಿಗೆ ಮಾಹಿತಿ ನೀಡುತ್ತೀಯಾ ಎಂದು ಅವಾಚ್ಯವಾಗಿ ಬೈದು, ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಕ್ಯಾಷಿಯರ್ನಲ್ಲಿದ್ದ 50,000 ರೂ. ಹಣವನ್ನು ದರೋಡೆ ಮಾಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಶ್ರಫ್ ಸೇರಿದಂತೆ ರಾಜೇಶ್ ಹಾಗೂ ಇನ್ನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಶ್ರಫ್ ಹಾಗೂ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಆಗಲೇ ಬಂಧಿಸಿದ್ದು, ರಾಜೇಶನಿಗಾಗಿ ಹಲವು ಬಾರಿ ಹುಡುಕಾಟ ನಡೆಸಿದ್ದರು.
ಆದರೆ ಇದೀಗ ಏಳು ವರ್ಷಗಳ ಅನಂತರ ರಾಜೇಶನ ಬಂಧನವಾಗಿದ್ದು, ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಯಡಿ ಕೊಣಾಜೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.