ಕಂಬಳ, ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ – ಜಾನಪದ ಕ್ರೀಡೆ ಕಂಬಳಕ್ಕಿದ್ದ ಅಡ್ಡಿ ಆತಂಕ ಇನ್ನು ದೂರ…!!
- ರಾಷ್ಟ್ರೀಯ ಸುದ್ದಿ
- May 18, 2023
- No Comment
- 121
ನ್ಯೂಸ್ ಆ್ಯರೋ : ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ‘ಜಲ್ಲಿಕಟ್ಟು’ ಮತ್ತು ಕಂಬಳ ಕ್ರೀಡೆಗೆ ಅವಕಾಶ ನೀಡುವ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಗುರುವಾರ ತನ್ನ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪಂಚ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ತೀರ್ಪು ಪ್ರಕಟಿಸಿದೆ.
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸುಮಾರು ಒಂದು ಶತಮಾನದಿಂದಲೂ ಇದೆ. ಇದು ತಮಿಳುನಾಡು ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ, ತಮಿಳುನಾಡು ಸರ್ಕಾರವು ಜಲ್ಲಿಕಟ್ಟು ತಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ಘೋಷಿಸಿದರೆ, ನ್ಯಾಯಾಂಗ ಆ ಬಗ್ಗೆ ಏನೂ ಮಾಡಲು ಬರುವುದಿಲ್ಲ.
ಹಾಗಾಗಿ, ನ್ಯಾಯಾಂಗವು ಈ ಕುರಿತು ಭಿನ್ನವಾದ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಮಗೆ ಸೂಕ್ತ ಎನಿಸುವ ಕಾನೂನು ರೂಪಿಸಲು ರಾಜ್ಯ ಸ್ವತಂತ್ರವಾಗಿದೆ ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್ ಕೆ ಎಂ ಜೋಸೆಫ್, ಜಸ್ಟೀಸ್ ಅಜಯ್ ರಸ್ತೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ ಟಿ ರವಿಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮಾನದಂಡವು ಕರ್ನಾಟಕದ ಕಂಬಳ ಹಾಗೂ ಮಹಾರಾಷ್ಟ್ರದ ಚಕ್ಕಡಿ ರೇಸ್ಗೂ ಅನ್ವಯವಾಗುತ್ತದೆ. ಈ ಸಂಬಂಧ ರಚಿಸಲಾಗಿರುವ ಕಾನೂನುಗಳನ್ನು ಕಟ್ಟು ನಿಟ್ಟಾದ ರೀತಿಯಲ್ಲಿ ಜಾರಿ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ವಹಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.