ಅಡಿಕೆ ಬೆಳೆದು ಕೋಟ್ಯಾಧಿಪತಿ ಆಗಬೇಕಾ?? ಮಾಡಾಳ್ ತಳಿ ಬೆಳೆಸಿ – ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ಹೆಸರು : ಏನಿದು ಮಾಡಾಳ್ ತಳಿ ?
- ವೈರಲ್ ನ್ಯೂಸ್
- March 9, 2023
- No Comment
- 177
ನ್ಯೂಸ್ ಆ್ಯರೋ : ‘ನೀವು ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕು ಎಂದು ಕನಸು ಕಾಣುತ್ತಿದ್ದೀರಾ? ಹಾಗಾದ್ರೆ ‘ಮಾಡಾಳ್’ ತಳಿಯ ಅಡಿಕೆ ಗಿಡಗಳನ್ನು ಬೆಳೆಸಿ ಕೋಟ್ಯಂತರ ರೂಪಾಯಿ ಸಂಪಾದಿಸಿ’ ಎಂಬ ವ್ಯಂಗ್ಯವಾದ ಶೀರ್ಷಿಕೆಯೊಂದಿಗೆ ಜೆಡಿಎಸ್ ಟ್ವೀಟ್ ಮಾಡಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಾಲೆಳೆದು, ಬಿಜೆಪಿಗೂ ಟಾಂಗ್ ನೀಡಿದೆ.
‘ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕನನ್ನು ಬಿಜೆಪಿ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಾ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಭ್ರಷ್ಟರಿಗೆ ಜೈಕಾರ ಹಾಕುವುದೇ ಬಿಜೆಪಿ ಇಂಡಿಯಾ ಹೇಳುವ ದೇಶ ಪ್ರೇಮ. ನಿಮ್ಮ ನಾಚಿಕೆಯಿಲ್ಲದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ’ ಎಂದು ಟ್ವೀಟ್ ಮೂಲಕ ಜೆಡಿಎಸ್ ಹರಿಹಾಯ್ದಿದೆ.
ಲಂಚ ಪ್ರಕರಣದ ಬಳಿಕ ಕೆಲ ದಿನ ತಲೆಮರೆಸಿಕೊಂಡಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಇದನ್ನು ಉಲ್ಲೇಖಿಸಿ ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೆ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ? ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ’ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ನೀವು ಪದೇ ಪದೇ ರಾಜ್ಯಕ್ಕೆ ಬರುತ್ತಿರುವುದು ಮಾಡಾಳು ವಿರೂಪಾಕ್ಷ ಅವರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ಎಂದು ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಬಾರಿ ಬಂದಾಗ ಸ್ಪಷ್ಟೀಕರಣ ನೀಡಿ ಎಂದು ಜೆಡಿಎಸ್ ಟ್ವೀಟ್ ಮೂಲಕ ಬಿಜೆಪಿ ವರಿಷ್ಠರನ್ನೂ ಕುಟುಕಿದೆ.