ಹುಬ್ಬಳ್ಳಿಯ ಭಾರತ್ ಮಿಲ್ ಟೆಕ್ಸ್ಟೈಲ್ ಇನ್ನು ನೆನಪು ಮಾತ್ರ – ನೆಲಸಮವಾಯಿತು ಬ್ರಿಟಿಷರ ಕಾಲದ 100 ಅಡಿ ಎತ್ತರದ ಮಿನಾರ್..
- ವೈರಲ್ ನ್ಯೂಸ್
- January 27, 2023
- No Comment
- 5971
ನ್ಯೂಸ್ ಆ್ಯರೋ : ಕಾರವಾರ ರಸ್ತೆಯಲ್ಲಿನ 1865ರಲ್ಲಿ ಬಾಸೆಲ್ ಮಿಶನ್ ಟೈಲ್ವರ್ಕ್ನಿಂದ ನಿರ್ಮಿಸಲಾಗಿದ್ದ, ಸುಮಾರು 100 ಅಡಿಗೂ ಎತ್ತರದ ಚಿಮಣಿ ಇಂದು ನೆಲಸಮವಾಗಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣಮಾಡಲಾಗಿದ್ದ ಜಿನ್ನಿಂಗ್ ಫ್ಯಾಕ್ಟರಿಯ ಚಿಮಣಿ (ಬೋಂಗಾ) ಇದಾಗಿದ್ದು, ಇದರ ಹಿಂದೆ ದೊಡ್ಡ ಇತಿಹಾಸವೇ ಇದೆ. 1865ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯಿಂದ ಸದರನ್ ಮರಾಠ ಸ್ಪಿನ್ನಿಂಗ್ ಆಂಡ್ ವೇವಿಂಗ್ ಕಂಪನಿ ಹೆಸರಲ್ಲಿ ಸ್ಥಾಪಿಸಿದ್ದ ಮಿಲ್ ಇದಾಗಿದೆ. ಇಲ್ಲಿ ತಯಾರಾಗುತ್ತಿದ್ದ ಕಾಟನ್ ಅನ್ನು ಬ್ರಿಟಿಷರು ಹಡಗಿನ ಮೂಲಕ ಮುಂಬಯಿ, ಗುಜರಾತ್ ಹಾಗೂ ಹೊರದೇಶಗಳಿಗೂ ಕಳುಹಿಸುತ್ತಿದ್ದರು.
ಕಾಲಘಟ್ಟದಲ್ಲಿ ಬದಲಾಗುತ್ತ ಅದೇ ಮುಂದೆ ಮಹಾದೇವ ಟೆಕ್ಸ್ಟೈಲ್ ಮಿಲ್, ಭಾರತ್ ಮಿಲ್ ಎಂದು ಹೆಸರಾಗಿತ್ತು. ಇದೀಗ ಸುಮಾರು 16 ಎಕರೆ ಜಾಗವನ್ನು ಖಾಸಗಿಯವರು ಖರೀದಿಸಿದ್ದು, ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ.
ಹುಬ್ಬಳ್ಳಿಗೆ ಛೋಟಾ ಮುಂಬೈ ಹೆಸರು ಬರಲು ಈ ಮಿಲ್ ಕಾರಣ:
ಟೆಕ್ಸ್ಟೈಲ್ ಉದ್ಯಮವೇ ಹುಬ್ಬಳ್ಳಿಗೆ ಛೋಟಾ ಮುಂಬೈ ಎಂದು ಹೆಸರು ಬರಲು ಮೂಲ ಕಾರಣವಾಗಿದೆ. ಮುಂಬಯಿ ಬಿಟ್ಟರೆ ಟೆಕ್ಸ್ಟೈಲ್ ಉದ್ಯಮ ನೆಲೆ ನಿಂತಿದ್ದು ಹುಬ್ಬಳ್ಳಿಯಲ್ಲಾಗಿತ್ತು. ಒಂದು ಕಾಲದಲ್ಲಿ ನೂರಾರು ಕುಟುಂಬಗಳಿಗೆ ಅನ್ನ ನೀಡುತ್ತಿದ್ದ ಟೆಕ್ಸ್ಟೈಲ್ ಉದ್ಯಮ ನಂತರದ ದಿನಗಳಲ್ಲಿ ಹಲವಾರು ಸಮಸ್ಯೆಗಳಿಗೆ ಸಿಲುಕಿ ಇಂದು ನೆಲ ಸಮವಾಗಿದೆ.
ಅನೇಕ ಮಂದಿಗೆ ಉದ್ಯೋಗ ನೀಡಿದ ಟೆಕ್ಸ್ಟೈಲ್:
ಅಂದಿನ ಕಾಲದಲ್ಲಿ ಉದ್ಯೋಗ ಅರಸಿ ಬಂದ ಅನೇಕ ಮಂದಿಗೆ ಟೆಕ್ಸ್ಟೈಲ್ ಆಸರೆಯಾಗಿ ನಿಂತಿತ್ತು. ಅದರಿಂದ ದೂರದ ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ ರೈಲು ಹತ್ತಿ ಬಂದು ಇಲ್ಲಿ ಜೀವನ ಕಂಡುಕೊಂಡವರು ಅನೇಕ ಮಂದಿ.
ಸಿಡಿಲು ಬಡಿದರೂ ಬಾಹುಬಲಿಯಂತೆ ಗಟ್ಟಿಯಾಗಿ ನಿಂತ ಮಿಲ್ :
ಮಹಾದೇವ ಜವಳಿ ಮಿಲ್ನಲ್ಲಿ ನೂರಾರು ಜನರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದರು. ಒಂದೊಮ್ಮೆ ಸಿಡಿಲು ಬಡಿದರೂ ಚಿಮಣಿ ಬಾಹುಬಲಿಯಂತೆ ಗಟ್ಟಿಯಾಗಿ ನಿಂತಿತ್ತು. ಕೇವಲ ಒಂದು ಭಾಗಕ್ಕೆ ಮಾತ್ರ ಧಕ್ಕೆ ಆಗಿರುವುದು ಬಿಟ್ಟರೆ ಮತ್ತೇನು ಆಗಿರಲಿಲ್ಲ.
ಅನುಮತಿ ಪಡೆಯದೆ ನೆಲಸಮ:
ಚಿಮಣಿ ನೆಲಸಮಗೊಳಿಸುವುದಕ್ಕೆ ಮುಂಚೆ ಅನುಮತಿ ಪಡೆಯದ ಕಾರಣಕ್ಕೆ ಜಾಗದ ಮಾಲೀಕರಾದ ಏಕನಾಥಸಾ ಅರ್ಜುನಸಾ ಇರಕಲ್ ಅವರಿಗೆ ಮಹಾನಗರ ಪಾಲಿಕೆಯ ವಲಯ 10ರ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಕರ್ನಾಟಕ ಪೌರ ನಿಗಮಗಳ ಅಧಿನಿಯಮ1976ರ ಪ್ರಕಾರ, ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸುವುದಕ್ಕೆ ಮುಂಚೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಅತ್ಯಂತ ದೊಡ್ಡದಾದ ಚಿಮಣಿ ಕೆಡವಲು ಅನುಮತಿ ಪಡೆಯದಿರುವುದು ತಿಳಿದುಬಂದಿದೆ. ಹಾಗಾಗಿ, ಏಳು ದಿನಗಳೊಳಗೆ ಚಿಮಣಿ ಇದ್ದ ಸ್ಥಳದ ದಾಖಲೆಗಳನ್ನು ಪರಿಶೀಲನೆಗಾಗಿ ಕಚೇರಿಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಪಾಯಕಾರಿ ಕಟ್ಟಡ ತೆರವು ಮಾಡಬೇಕಿದ್ದಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಶಿಥಿಲ ಕಟ್ಟಡ ಇದ್ದಲ್ಲಿ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಿ ತೆರವು ಕಾರ್ಯಾಚರಣೆ ಮಾಡಬೇಕಾಗಿರುವುದು ನಿಯಮ. ಆದರೆ ಚಿಮಣಿ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಈ ಸಂಬಂಧ ಯಾರಾದರೂ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಾಪೌರ ಈರೇಶ ಅಂಚಟಗೇರಿ ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ, ಇತಿಹಾಸದ ಕುರುಹಾಗಿದ್ದ ಚಿಮಣಿ(ಬೋಂಗಾ) ನೆಲಸಮವಾಗುವ ಮೂಲಕ ಟೆಕ್ಸ್ಟೈಲ್ ಉದ್ಯಮದ ಯುಗಾಂತ್ಯವಾದಂತಾಗಿದೆ. ಅವಶೇಷವಾಗಿ ಇದ್ದ ಚಿಮಣಿ(ಬೋಂಗಾ)ಯೂ ಧರೆಗೆ ಉರುಳಿದ್ದು, ಇನ್ನು ಹುಬ್ಬಳ್ಳಿಯಲ್ಲಿ ಟೆಕ್ಸ್ಟೈಲ್ ಉದ್ಯಮ ಎನ್ನುವುದು ನೆನಪಷ್ಟೇ ಎಂದಿದ್ದಾರೆ.