ಅದ್ದೂರಿಯಾಗಿ ಭಗವಾನ್ ಶ್ರೀ ಕೃಷ್ಣನನ್ನೇ ವಿವಾಹವಾದ ಯುವತಿ – ಇದು ಆಧುನಿಕ ಮೀರಾಬಾಯಿಯ ಸತ್ಯ ಕತೆ..!!
- ವೈರಲ್ ನ್ಯೂಸ್
- March 16, 2023
- No Comment
- 166
ನ್ಯೂಸ್ ಆ್ಯರೋ : ಈಗಿನ ಕಾಲದಲ್ಲಿ ಒಂದು ವಿವಾಹವೆಂದರೆ ಅದಕ್ಕೆ ಸಾವಿರ ಸುಳ್ಳಲ್ಲ, ಸಾವಿರಾರು ಸೌಲಭ್ಯಗಳಿರಬೇಕು. ಹುಡುಗಿಗೆ ಮದುವೆಯಾಗಬೇಕಿದ್ದರೆ ವರ ನೋಡಲು ಸುಂದರವಾಗಿರಬೇಕು, ಒಳ್ಳೆ ಕೆಲಸ, ಕೈತುಂಬ ಸಂಬಳ, ಓಡಾಡಲು ಕಾರು, ಸಿಟಿ ಜೀವನ ಇನ್ನೂ ಏನೆನೋ ಇರಬೇಕು. ಆದರೆ ಇಲ್ಲೊಬ್ಬ ಯುವತಿ ಮದುವೆ ವಿಚಾರದಲ್ಲಿ ಈಗಿನ ಕಾಲದ ಎಲ್ಲಾ ಹುಡುಗಿಯರನ್ನೂ ಮೀರಿಸಿ ಸಾಕ್ಷಾತ್ ಭಗವಂತನನ್ನೇ ಮದುವೆಯಾಗಿದ್ದಾಳೆ. ಇದು ನೋಡಲು, ಕೇಳಲು ಸಿನಿಮಾ ಕತೆಯಂತಿದ್ದರು ಇದು ಅಪ್ಪಟ ಆಧುನಿಕ ಮೀರಾಭಾಯಿಯೊಬ್ಬಳ ಸತ್ಯ ಕತೆ..!
ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ 30ರ ಹರೆಯದ ರಕ್ಷಾ ಎನ್ನುವ ಯುವತಿಯೊಬ್ಬಳು ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹವಾಗಿ ಎಲ್ಲರೂ ಅವಕ್ಕಾಗುವಂತೆ ಮಾಡಿದ್ದಾಳೆ. ಹಾಗಂತ ಇದೇನು ಸಿಂಪಲ್ ಮದುವೆಯಲ್ಲ. ಮದುವೆಯಲ್ಲಿ ಭರ್ಜರಿ ಭೋಜನ, ಸಂಗೀತ ರಸ ಮಂಜರಿ, ಕಿಕ್ಕಿರಿದು ತುಂಬಿದ ಜನ, ಸಂಭ್ರಮ ಎಲ್ಲವೂ ಇತ್ತು. ಆದರೆ ವರ ಕೂರಬೇಕಾದ ಜಾಗದಲ್ಲಿ ಮಾತ್ರ ಕೃಷ್ಣ ಪರಮಾತ್ಮನ ಮೂರ್ತಿಯಿತ್ತು.
ಕೃಷ್ಣನ್ ಲವ್ ಸ್ಟೋರಿ ಶುರುವಾಗಿದ್ದು ಹೀಗೆ..!!
ಸದ್ಯ, ಎಲ್ ಎಲ್ ಬಿ ಓದುತ್ತಿರುವ ರಕ್ಷಾಳಿಗೆ ಬಾಲ್ಯದಿಂದಲೂ ಭಗವಾನ್ ಶ್ರೀ ಕೃಷ್ಣನೆಂದರೆ ಅದೆನೋ ಮತ್ತೆಲ್ಲೂ ಇಲ್ಲದ ವ್ಯಾಮೋಹ, ಭಕ್ತಿ. ದಿನವೂ ಕೃಷ್ಣನನ್ನು ಶ್ರದ್ಧೆಯಿಂದ ಪೂಜಿಸುತ್ತಿದ್ದಳಂತೆ. ಆದರೆ ವಿವಾಹದ ನಂತರ ಏನು ಮಾಡುವುದು ಎಂದು ಯೋಚಿದ ಈಕೆಗೆ ಹೊಳೆದ ಉಪಾಯವೇ ಕೃಷ್ಣನನ್ನೇ ವಿವಾಹವಾಗುವುದು. ತನ್ನ ಆಸೆಯನ್ನ ತಂದೆಯ ಬಳಿ ಹೇಳಿದಾಗ, ತಂದೆ ರಂಜಿತ್ ಸಿಂಗ್ ಸೋಲಂಕಿ ಪೂರ್ಣ ಮನಸ್ಸಿನಿಂದಲೇ ಒಪ್ಪಿಕೊಂಡರಂತೆ.
ಮಗಳ ವಿವಾಹ ಕಾರ್ಯದಲ್ಲಿ ತೊಡಗಿಸಿಕೊಂಡ ರಕ್ಷಾಳ ತಂದೆ, ಆಕರ್ಷಕವಾದ ಆಮಂತ್ರಣ ಪತ್ರಿಕೆ ತಯಾರಿಸಿ ನೆಂಟರಿಷ್ಟರಿಗೆ, ಊರವರಿಗೆಲ್ಲ ಹಂಚಿಬಿಟ್ಟರು. ಮೆರವಣಿಗೆಯ ಮೂಲಕ ಕೃಷ್ಣನ ಮೂರ್ತಿ ಮದುವೆ ಮಂಟಪಕ್ಕೆ ಆಗಮಿಸಿತ್ತು. ಅಲ್ಲಿ ಮನೆಯವರು, ಊರವರೆಲ್ಲ ಸೇರಿ ಡಿಜೆ ಸದ್ದಿಗೆ ಕುಣಿದು, ಕುಪ್ಪಳಿಸಿದರಂತೆ. ಬಂದವರಿಗೆಲ್ಲ ಭರ್ಜರಿ ಊಟ ಹಾಕಿಸಲಾಗಿದೆ. ಅಂತಿಮವಾಗಿ ವಿವಾಹದ ಬಳಿಕ ರಕ್ಷಾ ಕೃಷ್ಣನ ಮೂರ್ತಿಯೊಂದಿಗೆ ತನ್ನ ಸಂಬಂಧಿಕರ ಮನೆಗೆ ತೆರಳಿ ಅನಂತರ ತವರಿಗೆ ಬಂದಿದ್ದಾಳಂತೆ. ಅಂತೂ ಇಂತೂ ಭಗವಾನ್ ಶ್ರೀ ಕೃಷ್ಣನ ಮಡದಿಯರ ಸಂಖ್ಯೆ ಈ ಮದುವೆಯಿಂದ ಹದಿನಾರು ಸಾವಿರದ ಒಂದಕ್ಕೆ ಏರಿಕೆಯಾಗಿದೆ..!