ತಾನೂರ್ ದೋಣಿ ಅಪಘಾತ – ಸಾವಿನ ಸಂಖ್ಯೆ 22ಕ್ಕೆ ಏರಿಕೆ, ಘಟನೆಗೆ ಕಾರಣ ಏನು?
- Uncategorized
- May 8, 2023
- No Comment
- 232
ನ್ಯೂಸ್ ಆ್ಯರೋ : ಕೇರಳದ ಮಲಪ್ಪುರಂ ಜಿಲ್ಲೆಯ ತೂವಲ್ ತೀರಮ್ ಕಡಲತೀರದಲ್ಲಿ ಭಾನುವಾರ ಸಾಯಂಕಾಲ ಸಂಭವಿಸಿದ ಬೋಟ್ ದುರಂತದಲ್ಲಿ ಸುಮಾರು 22 ಮಂದಿ ಮೃತಪಟ್ಟಿದ್ದಾರೆ. ಘಟನೆ ನಡೆದಾಗ ಹೌಸ್ಬೋಟ್ನಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಜೆ ಅವಧಿಯಾಗಿದ್ದರಿಂದ ಇವರು ಪ್ರವಾಸಕ್ಕಾಗಿ ಆಗಮಿಸಿದ್ದರು.
ಸಂಜೆ 5 ಗಂಟೆ ಬಳಿಕ ಇಂಥ ಪ್ರವಾಸಿ ಬೋಟ್ಗಳ ಸಂಚಾರಕ್ಕೆ ನಿಷೇಧವಿದ್ದರೂ 2 ಅಂತಸ್ತು ಹೊಂದಿರುವ, ಕೇವಲ 2 ಬಾಗಿಲು ಹೊಂದಿರುವ ಹೌಸ್ಬೋಟ್ ಕಾರ್ಯಾಚರಣೆ ನಡೆಸುತ್ತಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿದ್ದ ಕಾರಣ ಸಂಜೆ ಸುಮಾರು 7.40ರ ವೇಳೆಗೆ ಏಕಾಏಕಿ ಬೋಟ್ ಮಗುಚಿಕೊಂಡು ದುರ್ಘಟನೆ ಸಂಭವಿಸಿದೆ. ಈ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿಪತ್ತು ನಿರ್ವಹಣಾ ಫಂಡ್ನಿಂದ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಡಿದ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರದ ಭರವಸೆ ನೀಡಿದ್ದಾರೆ.
ಮೀನುಗಾರಿಕೆಗೆ ಬಳಸುತ್ತಿದ್ದ ಬೋಟನ್ನು ಪ್ರವಾಸಿ ಬೋಟನ್ನಾಗಿ ಪರಿವರ್ತಿಸಲಾಗಿದ್ದು, ಈ ವೇಳೆ ಯಾವ ನಿಯಮವನ್ನು ಪಾಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾನೂರ್ ನಿವಾಸಿ ನಾಸರ್ ಹೆಸರಿನಲ್ಲಿ ಬೋಟ್ ಇದ್ದು, ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.
“ಮಲಪ್ಪುರಂನ ತಾನೂರ್ ದೋಣಿ ಅಪಘಾತದಲ್ಲಿ ಸಂಭವಿಸಿದ ದುರಂತದ ಜೀವಹಾನಿಯಿಂದ ತೀವ್ರ ದುಃಖವಾಗಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಇದನ್ನು ಸಂಪುಟ ಸಚಿವರು ನೋಡಿಕೊಳ್ಳುತ್ತಿದ್ದಾರೆ. ದುಃಖದಲ್ಲಿರುವ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪ” ಎಂದು ಪಿಣರಾಯಿ ವಿಜಯನ್ ಟ್ವೀಟ್ನಲ್ಲಿ ಹೇಳಿದ್ದಾರೆ.