
ಬಿಟ್ ಕಾಯಿನ್ ಪ್ರಕರಣ ಹಿನ್ನೆಲೆ, ಹ್ಯಾಕರ್ ಶ್ರೀಕಿ ವಿಚಾರಣೆ – ನಿಂತಲ್ಲೇ ಬೆವೆತು ನಡುಗುತ್ತಿದ್ದಾರೆ ರಾಜಕಾರಣಿಗಳು, ಅಧಿಕಾರಿಗಳು..!!
- ಕರ್ನಾಟಕ
- September 2, 2023
- No Comment
- 61
ನ್ಯೂಸ್ ಆ್ಯರೋ : ಕೆಲವು ಸಮಯಗಳ ಹಿಂದೆ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ (ಎಸ್.ಟಿ.ಐ.) ತನಿಖೆ ನಡೆಸುತ್ತಿದೆ. ಈ ಸಂಬಂಧ ಅಧಿಕಾರಿಗಳು ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಹೇಳಿಕೆ ಪಡೆದುಕೊಂಡಿದ್ದಾರೆ.
ಬೆಚ್ಚಿಬಿದ್ದ ರಾಜಕಾರಣಿಗಳು
ನನ್ನನ್ನು ಬೆದರಿಸಿ ಕೆಲವು ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳು ನೂರಾರು ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಶ್ರೀಕಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಭಯ ಆರಂಭವಾಗಿದೆ.
ಡಾರ್ಕ್ ವೆಬ್ ಮೂಲಕ ವಿದೇಶದಿಂದ ‘ಹೈಡ್ರೋ ಗಾಂಜಾ’ ತರಿಸಿದ್ದ ಆರೋಪದಡಿ 2020ರಲ್ಲಿ ಶ್ರೀಕಿ ಮತ್ತು ಇತರರ ವಿರುದ್ಧ ಬೆಂಗಳೂರಿನ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಸಿಬಿ ಅಧಿಕಾರಿಗಳು 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಮತ್ತು ಆ್ಯಪಲ್ ಮ್ಯಾಕ್ ಬುಕ್ ವಶಕ್ಕೆ ಪಡೆದಿದ್ದರು.
ಇದೇ ವೇಳೆ ಸಾಕ್ಷ್ಯಗಳನ್ನು ತಿರುಚಿದ್ದ ಆರೋಪದಡಿ ಸಿಸಿಬಿ ಅಧಿಕಾರಿಗಳು ಮತ್ತು ಇತರ ತನಿಖಾದಿಕಾರಿಗಳ ವಿರುದ್ದ ಕಾಟನ್ ಪೇಟೆ ಠಾಣೆಯಲ್ಲಿ ಎಫ್.ಆರ್.ಐ. ದಾಖಲಾಗಿದೆ. ಹೀಗಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಎಸ್.ಐ.ಟಿ. ವಿಚಾರಣೆ ನಡೆಸುತ್ತಿದೆ. ಜಾಮೀನು ಪಡೆದಿದ್ದ ಶ್ರೀಕಿಗೆ ನೋಟಿಸ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾನೆ.