ರವೀಂದ್ರ ಜಡೇಜಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ – ಬೌಲಿಂಗ್ ಮಾಡುತ್ತಿದ್ದ ಜಡ್ಡುಗೆ ಸಿರಾಜ್ ನೀಡಿದ್ದೇನು? ವೈರಲ್ ವಿಡಿಯೋದಲ್ಲಿ ಏನಿದೆ?
- ಕ್ರೀಡಾ ಸುದ್ದಿ
- February 10, 2023
- No Comment
- 331
ನ್ಯೂಸ್ ಆ್ಯರೋ : ಸದ್ಯ ನಡೆಯುತ್ತಿರುವ ಬಾರ್ಡರ್- ಗಾವಸ್ಕರ್ ಟ್ರೋಫಿ ಕೂಟದ ಮೊದಲ ದಿನದಾಟದಲ್ಲಿ ಬೌಲರ್ ರವೀಂದ್ರ ಜಡೇಜಾಗೆ ಸಿರಾಜ್ ಅವರು ಗುಟ್ಟಾಗಿ ಏನನ್ನೋ ನೀಡುತ್ತಿರುವ ಚಿತ್ರವನ್ನು ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಚಾನೆಲ್ ಫಾಕ್ಸ್ ಕ್ರಿಕೆಟ್ ಅಪರಾಧದಂತೆ ಚಿತ್ರಿಸಿದ್ದು, ಇದಕ್ಕೆ ಟೀಂ ಇಂಡಿಯಾ ಉತ್ತರ ನೀಡಿದೆ.
ಸಿರಾಜ್ ಅವರು ರವೀಂದ್ರ ಜಡೇಜಾಗೆ ನೋವು ನಿವಾರಕ ಕ್ರೀಮ್ ನೀಡಿದ್ದಾರೆ ಎಂದು ಭಾರತೀಯ ತಂಡದ ಮ್ಯಾನೇಜ್ ಮೆಂಟ್ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಗೆ ತಿಳಿಸಿದೆ.
ಪಂದ್ಯದ ಎರಡನೇ ಸೆಷನ್ನಲ್ಲಿ ಬೌಲಿಂಗ್ ಮಾಡುವ ವೇಳೆ ಜಡೇಜಾ ತಮ್ಮ ಬೆರಳಿಗೆ ಏನನ್ನೋ ಹಚ್ಚಿಕೊಳ್ಳುತ್ತಿರುವ ವೀಡಿಯೊವನ್ನು ಆಸ್ಟ್ರೇಲಿಯಾದ ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಜಡೇಜಾ, ಮೊಹಮ್ಮದ್ ಸಿರಾಜ್ ಬಳಿ ಏನನ್ನೋ ತೆಗೆದುಕೊಂಡು ಎಡ ಬೆರಳಿಗೆ ಉಜ್ಜಿಕೊಳ್ಳುತ್ತಿರುವ ದೃಶ್ಯವಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಅವರನ್ನು ಆಸ್ಟ್ರೇಲಿಯಾ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದು, ಪೈನ್ ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ.
ವೀಡಿಯೊ ತುಣುಕಿನಲ್ಲಿ, ಜಡೇಜಾ ತನ್ನ ಬಲಗೈಯಿಂದ ಮೊಹಮ್ಮದ್ ಸಿರಾಜ್ ಅವರ ಅಂಗೈಯ ಹಿಂಭಾಗದಿಂದ ವಸ್ತುವನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಜಡೇಜಾ ಬೌಲ್ ಮಾಡಲು ಪ್ರಾರಂಭಿಸುವ ಮೊದಲು ಈ ವಸ್ತುವನ್ನು ಅವರ ಎಡಗೈಯ ತೋರು ಬೆರಳಿಗೆ ಉಜ್ಜಿದರು.
ಫೂಟೇಜ್ ನಲ್ಲಿ ಯಾವುದೇ ಹಂತದಲ್ಲಿ ಜಡೇಜಾ ಚೆಂಡಿನ ಮೇಲೆ ಏನನ್ನೂ ಉಜ್ಜುವುದನ್ನು ಕಂಡು ಬಂದಿಲ್ಲ, ಆದರೂ ಆ ಸಮಯದಲ್ಲಿ ಅವರ ಕೈಯಲ್ಲಿ ಚೆಂಡನ್ನು ಹೊಂದಿದ್ದರು.
ಆಸ್ಟ್ರೇಲಿಯಾ 5 ವಿಕೆಟ್ಗೆ 120 ರನ್ ಗಳಿಸಿದ್ದಾಗ ಈ ಘಟನೆ ನಡೆದಿದ್ದು, ಆ ವೇಳೆಗಾಗಲೇ ಜಡೇಜಾ ಮಾರ್ನಸ್ ಲ್ಯಾಬುಶೇನ್, ಮ್ಯಾಟ್ ರೆನ್ಶಾ ಮತ್ತು ಸ್ಟೀವನ್ ಸ್ಮಿತ್ರನ್ನು ಔಟ್ ಮಾಡಿದ್ದರು.
ಮೊದಲ ದಿನದ ಆಟ ಮುಗಿದ ತಕ್ಷಣ ಜಡೇಜಾ ಜೊತೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜರ್ ಅವರಗೆ ಈ ವೀಡಿಯೊ ಕ್ಲಿಪ್ ಅನ್ನು ತೋರಿಸಲಾಗಿದೆ ಎಂದು ತಿಳಿದು ಬಂದಿದೆ. ರೆಫ್ರಿ ಪೈಕ್ರಾಫ್ಟ್ ಘಟನೆಯ ಬಗ್ಗೆ ತಂಡಕ್ಕೆ ತಿಳಿಸಲು ಬಯಸಿದ್ದರು ಮತ್ತು ಜಡೇಜಾ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಹೇಳಿದೆ.
ಕಳ್ಳಾಟ ಎಸಗಿ ಸಿಕ್ಕಿಬಿದ್ದಿದ್ದ ಆಸೀಸ್ ಆಟಗಾರರು…!!
5 ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡನ್ನು ವಿರೋಪಗೊಳಿಸಿದ ಆರೋಪದಡಿ ಕ್ರಿಕೆಟ್ ಜಗತ್ತಿನ ಮುಂದೆ ತಲೆ ತಗ್ಗಿಸಿದ್ದರು. ವಾಸ್ತವವಾಗಿ 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಯುವ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ಸ್ಯಾಂಡ್ಪೇಪರ್ನಿಂದ ಉಜ್ಜುವ ವೇಳೆ ಕ್ಯಾಮೆರಾ ಕಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದರ ನಂತರ, ಮೂವರಿಗೂ ಒಂದು ವರ್ಷದವರೆಗೆ ಕ್ರಿಕೆಟ್ನಿಂದ ನಿಷೇಧ ಹೇರಲಾಗಿತ್ತು. ಈ ಆಟಗಾರರ ಪೈಕಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ.