ಇಂದು ರಾತ್ರಿ 10 ಗಂಟೆಗೆ ಕೊನೆಯಾಗಲಿದೆ ಅಯ್ಯಪ್ಪ ಸ್ವಾಮಿಯ ದರ್ಶನ – ನಾಳೆ ಬೆಳಿಗ್ಗೆಯಿಂದ ಭಕ್ತರಿಗೆ ಅಯ್ಯಪ್ಪನ ದರ್ಶನ ಭಾಗ್ಯವಿಲ್ಲ..!!
- ಧಾರ್ಮಿಕ
- January 19, 2023
- No Comment
- 185
ನ್ಯೂಸ್ ಆ್ಯರೋ : ಇಂದು ರಾತ್ರಿ 10 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಾಲಾಧಾರಿಗಳಿಗೆ ಅಯ್ಯಪ್ಪ ದರ್ಶನ ಕೊನೆಗೊಳ್ಳಲಿದೆ. 41 ದಿನಗಳ ಕಠಿಣ ವೃತದೊಂದಿಗಿನ ಯಾತ್ರಾ ಅವಧಿ ನಾಳೆಗೆ ಕೊನೆಯಾಗಲಿದೆ. ಹೀಗಿದ್ದರೂ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಬರಿ ಮಲೆಗೆ ಆಗಮಿಸುವ ಭಕ್ತರು ಮಣಿಕಂಠನ ದರ್ಶನ ಪಡೆಯುತ್ತಿದ್ದಾರೆ.
ಪದ್ದತಿಯಂತೆ, ಇಂದು ರಾತ್ರಿ ಸುಮಾರು 10 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಾಲಾಧಾರಿಗಳಿಗೆ ಅಯ್ಯಪ್ಪ ಸ್ವಾಮಿ ದರ್ಶನ ಕೊನೆಗೊಳ್ಳಲಿದೆ. ಬಳಿಕ “ಗುರುತಿ” ಹೆಸರಿನ ವಿಧಿವಿಧಾನ ನಡೆಸಿ, ಜನವರಿ 20ರ ಬೆಳಗ್ಗೆ 6 ಗಂಟೆಗೆ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ನಾಳೆ ಬೆಳಗ್ಗೆ ಭಕ್ತರಿಗೆ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎನ್ನಲಾಗಿದೆ.
ಈ ಬಾರಿ ಶಬರಿಮಲೆಗೆ ದಾಖಲೆ ಪ್ರಮಾಣದಲ್ಲಿ ಮಾಲಾಧಾರಿಗಳು ಆಗಮಿಸಿದ್ದಾರೆ. ಜೊತೆಗೆ ಈ ಬಾರಿ ದೇಗುಲದ ವಾರ್ಷಿಕ ಆದಾಯವೂ ಹೆಚ್ಚಾಗಿತ್ತು. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಆಗಮನವಾಗಿತ್ತು. ಸದ್ಯ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರ ಪ್ರದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.
ಸುಮಾರು 45 ಲಕ್ಷ ಭಕ್ತರು ಈ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದು ಒಟ್ಟು, 312.40 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಟ್ರಾವಂಕೂರು ದೇವಸ್ವಂ ಬೋರ್ಡ್ ಮಾಹಿತಿ ನೀಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಜನರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಆಗಿರಲಿಲ್ಲ. ಆದರೆ, ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದಾರೆ. ಕೇವಲ 39 ದಿನಗಳಲ್ಲಿ ಬರೋಬ್ಬರಿ 224 ಕೋಟಿ ರೂ. ಆದಾಯ ಹರಿದು ಬಂದಿದೆ ಎನ್ನಲಾಗಿದೆ.
ಈ ಬಾರಿ 20% ಮಕ್ಕಳ ಆಗಮನವಾಗಿತ್ತು. ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಅವರಿಗಾಗಿ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆಯಾಗಿ ಈ ಬಾರಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಯ್ತಪ್ಪ ಭಕ್ತರು ಶಬರಿ ಮಲೆಗೆ ದೇಶದ ನಾನಾ ಮೂಲೆಗಳಿಂದ ಹರಿದು ಬಂದಿದ್ದರು.