
ಇಂದು ದೇಶದಾದ್ಯಂತ ರಕ್ಷಾಬಂಧನದ ಸಂಭ್ರಮ – ಪುರಾಣದಲ್ಲೂ ಇದೆ ಈ ಹಬ್ಬದ ಉಲ್ಲೇಖ, ಇದರ ಮಹತ್ವ ಏನು?
- ಧಾರ್ಮಿಕ
- August 30, 2023
- No Comment
- 45
ನ್ಯೂಸ್ ಆ್ಯರೋ : ಶ್ರಾವಣ ಮಾಸ ದೇಶದಾದ್ಯಂತ ಆಚರಿಸುವ ಹಬ್ಬಗಳಲ್ಲಿ ಒಂದು ರಕ್ಷಾಬಂಧನ. ಸೋದರತ್ವ ಸಂಬಂಧವನ್ನು ಗಟ್ಟಿಗೊಳಿಸುವ ಈ ಹಬ್ಬವನ್ನು ಕರ್ನಾಟಕ ಸೇರಿದಂತೆ ದೇಶದ ವಿವಿದೆಢೆಯಲ್ಲಿ ತುಂಬಾ ಭಕ್ತಿಯಿಂದ ಸರಳವಾಗಿ ಆಚರಿಸಲಾಗುತ್ತದೆ.
ರಕ್ಷಾಬಂಧನ ದಿನದಂದು ತಂಗಿ ತನ್ನ ಅಣ್ಣನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ನಂತರ ಆರತಿಯನ್ನು ಮಾಡಿ, ಕುಂಕುಮ ಹಚ್ಚಿ, ಅಣ್ಣನ ಆಶೀರ್ವಾದವನ್ನು ಪಡೆದು ಸಿಹಿ ತಿಂಡಿಯನ್ನು ತಿನ್ನಿಸುತ್ತಾಳೆ. ಈ ವೇಳೆ ಅಣ್ಣ ತನ್ನ ತಂಗಿಗೆ ನೆರಳಾಗಿರುತ್ತೇನೆಂದು ಹೇಳುತ್ತಾನೆ.
ರಕ್ಷಾ ಬಂಧನದ ಹಿನ್ನೆಲೆ:
ಭಾರತದ ಪುರಾಣದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಯಿದೆ. ಅದೇ ರೀತಿ ರಕ್ಷಾ ಬಂಧನಕ್ಕೂ ಕೂಡ ಅನೇಕ ಇತಿಹಾಸಗಳಿವೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡಿದನು.
ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.
ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ಹೀಗೆ ರಕ್ಷಾ ಬಂಧನಕ್ಕೆ ತನ್ನದೆ ಆದ ಹಿನ್ನೆಲೆಯನ್ನು ಹೊಂದಿದೆ.
ಮಹತ್ವ:
ರಕ್ಷಾಬಂಧನ ಹಬ್ಬ ಅಣ್ಣ-ತಂಗಿಯರ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಮೂಲಕ ಅಣ್ಣ ಯಾವ ಸಂದರ್ಭದಲ್ಲೂ ತನ್ನ ತಂಗಿಯನ್ನು ಯಾವ ಕಷ್ಟದ ಸಂದರ್ಭದಲ್ಲೂ ಕಾಪಾಡಿಕೊಳ್ಳಬೇಕೆಂಬ ಮನವರಿಕೆ ಮಾಡುತ್ತದೆ. ಈ ಹಬ್ಬವನ್ನು ಧರ್ಮ ಭೇದವಿಲ್ಲದೆ ನಾಡಿನಾದ್ಯಂತ ಎಲ್ಲರೂ ಆಚರಿಸುತ್ತಾರೆ.