ಹೊಸ ಸಂಸತ್ ಭವನದಲ್ಲಿ ರಾರಾಜಿಸಲಿದೆ ಸೆಂಗೋಲ್ – ಏನಿದು ಪದ್ಧತಿ? ಏನಿದರ ಮಹತ್ವ?
- ರಾಷ್ಟ್ರೀಯ ಸುದ್ದಿ
- May 25, 2023
- No Comment
- 387
ನ್ಯೂಸ್ ಆ್ಯರೋ : ರವಿವಾರ (ಮೇ 28)ಭಾರತ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಅಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಪಕ್ಕದಲ್ಲಿ ರಾಜದಂಡ ಸೆಂಗೋಲ್ ಸ್ಥಾಪಿಸಲಾಗುವುದು. ಏನಿದು ಸೆಂಗೋಲ್, ಭಾರತದ ಇತಿಹಾಸದಲ್ಲಿ ಏನಿದರ ಮಹತ್ವ, ಯಾಕಾಗಿ ಇದನ್ನು ಸ್ಥಾಪಿಸಲಾಗುತ್ತದೆ ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅಧಿಕಾರ ಹಸ್ತಾಂತರದ ದ್ಯೋತಕವಾಗಿ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಜವಾಹರಲಾಲ್ ನೆಹರೂ ಅವರಿಗೆ ನೀಡಿದ್ದ ಸೆಂಗೋಲ್ ಇದಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪೀಕರ್ ಆಸನದ ಪಕ್ಕದಲ್ಲಿಯೇ ಸ್ಥಾಪಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸೆಂಗೋಲ್ ಪದದ ಅರ್ಥ
ಸೆಮ್ಮೈ ಎಂಬ ತಮಿಳು ಪದದಿಂದ ಸೆಂಗೋಲ್ ಪದ ಹುಟ್ಟಿಕೊಂಡಿದೆ. ಹೀಗೆಂದರೆ ಸದಾಚಾರ ಎಂದರ್ಥ. ಧರ್ಮ ಮತ್ತು ನ್ಯಾಯದ ಸಂಕೇತ ಈ ಸೆಂಗೋಲ್. ದಂಡದ ಮೇಲೆ ನಂದಿಯ ಪ್ರತಿಮೆ ಇರುತ್ತದೆ.
ಚೋಳರ ಕಾಲದ್ದು
ಸೆಂಗೋಲ್ ಚೋಳರ ಕಾಲದ್ದು ಎನ್ನುವುದು ವಿಶೇಷ. ಇದು ಚೋಳ ರಾಜರ ಪಟ್ಟಾಭಿಷೇಕ ಸಮಾರಂಭದ ಭಾಗವಾಗಿತ್ತು. ರಾಜದಂಡದ ಮೂಲಕ ಅಧಿಕಾರ ಹಸ್ತಾಂತರ ಮಾಡಲು ಸಿ.ರಾಜಗೋಪಾಲಾಚಾರಿ ಅದಕ್ಕಾಗಿ ಶೋಧ ನಡೆಸಿದ್ದರು. ತಮಿಳುನಾಡಿನ ಮೈಲಾರತುಡರೈ ಜಿಲ್ಲೆಯ ತಿರುವಾಡುತುರೈ ಅಧೀನಂ ಎಂಬ ಶೈವ ಮಠದ ಸ್ವಾಮೀಜಿ ಸೂಕ್ತ ರಾಜದಂಡ ನೀಡುವುದಾಗಿ ಹೇಳಿದ್ದರು. ಅದರಂತೆ ವುಮ್ಮಿಡಿ ಎತ್ತಿರಾಜುಲು ಮತ್ತು ವುಮ್ಮಿಡಿ ಸುಧಾಕರ ಈ ಐದು ಅಡಿ ಉದ್ದದ ರಾಜದಂಡ ಸಿದ್ಧಪಡಿಸಿದ್ದರು.
ದಾಖಲೆಯ ಪ್ರಕಾರ, ಅಥೀನಂನ ಉಪ ಪ್ರಧಾನ ಅರ್ಚಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ ಸೇರಿದಂತೆ ಮೂವರು ಹೊಸದಾಗಿ ತಯಾರಿಸಿದ ಸೆಂಗೋಲ್ ಅನ್ನು ತಮಿಳುನಾಡಿನಿಂದ ದಿಲ್ಲಿಗೆ ತಂದರು. ಆ. 14, 1947ರಂದು ಅರ್ಚಕರು ಈ ರಾಜದಂಡವನ್ನು ಮೌಂಟ್ ಬ್ಯಾಟನ್ ಅವರಿಗೆ ನೀಡಿದರು. ನಂತರ ಅದನ್ನು ಹಿಂಪಡೆದುಕೊಂಡರು. ಬಳಿಕ ಅದನ್ನು ಮೆರವಣಿಗೆ ಮೂಲಕ ನೆಹರು ಅವರ ಮನೆಗೆ ಕೊಂಡೊಯ್ದು, ಅವರಿಗೆ ಹಸ್ತಾಂತರಿಸಲಾಯಿತು.
ಮಹತ್ವವೇನು?
ಈ ಸೆಂಗೋಲ್ ಅನ್ನು ಸ್ವೀಕರಿಸಿದವರು ನಿಷ್ಪಕ್ಷಪಾತವಾಗಿ ಆಡಳಿತ ನಡೆಸಬೇಕು ಎನ್ನುವುದು ಆಶಯ. 1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಖಚಿತವಾದಾಗ ಅಧಿಕಾರ ಹಸ್ತಾಂತರ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡಿತು. ಆಗ ಸಿ.ರಾಜಗೋಪಾಲಾಚಾರಿ ಚೋಳ ರಾಜವಂಶದಲ್ಲಿ ನಡೆಸುತ್ತಿದ್ದಂತೆ ರಾಜದಂಡದ ಮೂಲಕ ಅಧಿಕಾರ ಹಸ್ತಾಂತರಿಸುವ ಸಲಹೆ ನೀಡಿದ್ದರು.