ಆಂಧ್ರ ಪ್ರದೇಶದಲ್ಲಿ ತಹಶೀಲ್ದಾರರಿಂದ ದೈವಕ್ಕೆ ಅವಮಾನ: ಭೂತದ ವೇಷ ಹಾಕಿ ಮಾಡಿದ ನೃತ್ಯಕ್ಕೆ ಆಕ್ಷೇಪ, ರಿಷಬ್ ಶೆಟ್ಟಿ ಮನವಿಯ ಹೊರತಾಗಿಯೂ ಕರಾವಳಿಗರ ಭಾವನೆಗೆ ಧಕ್ಕೆ
- ರಾಷ್ಟ್ರೀಯ ಸುದ್ದಿ
- November 24, 2022
- No Comment
- 235
ನ್ಯೂಸ್ ಆ್ಯರೋ: ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರು ‘ಕಾಂತಾರ’ ಚಿತ್ರದ ಹಾಡಿಗೆ ಪಂಜುರ್ಲಿ ದೈವದ ವೇಷ ಧರಿಸಿ ವೇದಿಕೆಯಲ್ಲಿ ನೃತ್ಯ ಮಾಡುವ ಮೂಲಕ ತುಳುನಾಡಿನ ದೈವಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶದ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಸಾದ್ ಅವರು ನೃತ್ಯ ಪ್ರದರ್ಶನ ನೀಡಿ, ಪ್ರಥಮ ಸ್ಥಾನವನ್ನು ಪಡೆದಿದ್ದರು. ಇವರ ಪ್ರದರ್ಶನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲದ ಸಂದರ್ಭದಲ್ಲೂ ವೇಷ ಧರಿಸಬೇಕಾದರೂ ಆ ಸಮುದಾಯದ ಜನರು ತುಂಬಾ ಮಡಿವಂತಿಕೆಯಲ್ಲಿ ಇದ್ದು, ಭಯ–ಭಕ್ತಿ ಹಾಗೂ ಕಟ್ಟು ಪಾಡುಗಳನ್ನು ಅನುಸರಿಸಿ ಕೋಲವನ್ನು ಮಾಡುತ್ತಾರೆ. ತಪ್ಪಿಯೂ ಬೇರೆ ಸಂದರ್ಭಗಳಲ್ಲಿ ಭೂತದ ವೇಷ ಹಾಕಿ ಅನುಕರಣೆಯಾಗಲಿ, ನೃತ್ಯವಾಗಲಿ ಮಾಡುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ದೊಡ್ಡ ಅವಘಡಗಳೇ ಸಂಭವಿಸುತ್ತದೆ ಎಂಬುದು ಕರಾವಳಿಗರ ನಂಬಿಕೆ.
ಸ್ಮರ್ಧೆಗೆ, ಮನರಂಜನೆಗಾಗಿ ದೈವದ ವೇಷವನ್ನು ಹಾಕಿ ಅವಮಾನ ಮಾಡಬಾರದು. ಕಾಂತಾರ ಸಿನಿಮಾವನ್ನು ಬಿಡುಗಡೆ ಮಾಡಿದ ಕೂಡಲೇ ನಟ ರಿಷಬ್ ಶೆಟ್ಟಿ ಅವರು ಈ ಸಂಬಂಧ ಸಂದೇಶವನ್ನು ರವಾನಿಸಿದ್ದರು. ಯಾವುದೇ ಕಾರಣಕ್ಕೂ ಸಿನಿಮಾದಲ್ಲಿರುವ ದೈವದ ಅಭಿನಯವನ್ನು ಅನುಕರಣೆ ಮಾಡಿ, ತಪ್ಪು ಮಾಡಬೇಡಿ. ಯಾರ ಭಾವನೆಗೂ ಧಕ್ಕೆ ತರುವಂತಹ ಕೆಲಸವನ್ನು ಮಾಡಬೇಡಿ ಎಂದು ಮನವಿಯನ್ನು ಮಾಡಿದ್ದರು. ಆದರೆ, ಇದೀಗ ಒಂದರ ನಂತರ ಒಂದು ಈ ರೀತಿಯ ಘಟನಾವಳಿಗಳು ನಡೆಯುತ್ತಿದ್ದು, ಕರಾವಳಿಗರ ಭಾವನೆಗೆ ಧಕ್ಕೆಯಾಗುತ್ತಿದೆ ಎಂಬ ದೂರು ವ್ಯಕ್ತವಾಗಿದೆ.
ಕಾಂತಾರ ಕರಾವಳಿಯ ದೈವಾರಾಧನೆ, ಪ್ರಕೃತಿ– ಮನುಷ್ಯನ ಸಂಬಂಧ ಆಧಾರಿತ ಸಿನಿಮಾವಾಗಿದ್ದು, ವಿಶ್ವವೇ ಮೆಚ್ಚುಕೊಂಡಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಗೂ ಡಬ್ ಆಗಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಹೊಸ ಪ್ರತಿಭೆ ಸಪ್ತಮಿ ಗೌಡ ಅವರು ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್, ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಒಳಗೊಂಡಿದೆ.