ಇಂದಿನಿಂದ ಐತಿಹಾಸಿಕ ಮಹಾಕುಂಭಮೇಳ; ಬರೋಬ್ಬರಿ 40 ಕೋಟಿ ಜನ ಭಾಗಿಯಾಗೋ ನಿರೀಕ್ಷೆ

ನ್ಯೂಸ್ ಆ್ಯರೋ: ಗಂಗಾ, ಯಮುನಾ, ಸರಸ್ವತಿ ಪುಣ್ಯನದಿಗಳ ಸಂಗಮ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದೆ. ಚಾರಿತ್ರಿಕ ಉತ್ಸವಕ್ಕೆ ಪ್ರಯಾಗ್ ನಗರ ಸರ್ವ ಸನ್ನದ್ಧಗೊಂಡಿದೆ. ಇಂದಿನಿಂದ ಆರಂಭವಾಗಲಿರುವ ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರ ಸಮಾಗಮವಾಗಲಿದ್ದು ಸ್ವರ್ಗವೇ ಧರೆಗಿಳಿದಂತಿದೆ.
ಮಹಾಕುಂಭಮೇಳ 12 ವರ್ಷಕ್ಕೊಮ್ಮೆ ಜರುಗುವ ದೇಶದ ಧಾರ್ಮಿಕ, ಸಾಂಸ್ಕೃತಿಕ ವೈಭವ ಸಾರುವ ಮಹೋತ್ಸವ. ಗಂಗಾ, ಯಮುನಾ ಹಾಗೂ ಪೌರಾಣಿಕ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಪುಣ್ಯಸ್ನಾನ ಎನಿಸಿದೆ. ರಾಕ್ಷಕರ ಮೇಲೆ ದೇವತೆಗಳ ವಿಜಯದ ಸಂಕೇತವಾಗಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಸಲಾಗ್ತಿದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಶುರುವಾಗಲಿದೆ. ಐತಿಹಾಸಿಕ ಮಹಾಕುಂಭಮೇಳಕ್ಕೆ ಪ್ರಯಾಗ್ ನಗರ ಸರ್ವ ರೀತಿಯಲ್ಲೂ ಸನ್ನದ್ಧಗೊಂಡಿದೆ. 144 ವರ್ಷಗಳ ಬಳಿಕ ನಡೆಯುತ್ತಿರುವ ಅಪರೂಪದ ಮಹಾಕುಂಭಮೇಳ ಫೆಬ್ರವರಿ 26ರವರೆಗೆ 45 ದಿನಗಳ ಕಾಲ ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಪಾವನ ಸಂಗಮದಲ್ಲಿ ನಡೆಯಲಿದ್ದು 45 ಕೋಟಿಗೂ ಅಧಿಕ ಭಕ್ತರು, ಸಾಧು-ಸಂತರು ರಾಜಕಾರಣಿಗಳು, ಉದ್ಯಮಿಗಳು ಭಾಗಿಯಾಗುವ ನಿರೀಕ್ಷೆ ಇದ್ದು ಪ್ರಯಾಗ್ರಾಜ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಾಲ್ಕು ಗ್ರಹಗಳು ಅಪರೂಪದ ಸಂಯೋಜನೆಯಾಗುತ್ತಿರುವ ಹೊತ್ತಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು ಕೋಟ್ಯಂತರ ಹಿಂದೂಗಳು ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಲಿದ್ದಾರೆ. ವಿಶ್ವಾದಾದ್ಯಂತ ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.
ಮಹಾಕುಂಭಮೇಳದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಯುಪಿ ಪೊಲೀಸರು ಸುಮಾರು ಏಳು ಹಂತಗಳಲ್ಲಿ ಬಿಗಿಭದ್ರತೆ ಒದಗಿಸಿದ್ದಾರೆ. ಇನ್ನು 12 ಸಾವಿರ ಕೋಟಿ ವೆಚ್ಚದಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು ಸಂಕ್ರಾಂತಿಗೆ ಆರಂಭವಾಗಿ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ. ಮಹಾಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂದಿನ 45 ದಿನಗಳ ಕಾಲ ಭಾರತದ ವೈವಿಧ್ಯಮಯ ಜಗತ್ತು ಅನಾವರಣಗೊಳ್ಳಲಿದೆ.
Leave a Comment