
ಪುತ್ತೂರು : ಪ್ರೀತಿ ತಂದ ಸಾವು, 18 ವರ್ಷದ ಯುವತಿ ಪ್ರಿಯಕರನಿಂದಲೇ ಕೊಲೆ – ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬೀದಿ ಹೆಣವಾದ ಯುವತಿ..!!
- ಕರಾವಳಿ
- August 25, 2023
- No Comment
- 189
ನ್ಯೂಸ್ ಆ್ಯರೋ : ಪ್ರೀತಿ ಮಾಡಿ ಅದೆಷ್ಟೋ ಪ್ರೇಮಿಗಳು ಅಮರ ಪ್ರೇಮಿಗಳಾಗಿದ್ದಾರೆ. ಪ್ರೀತಿ ಎಂದರೆ ಕೆಲವೊಂದು ಪೋಷಕರು ದ್ವೇಷ ಮಾಡೋದು ಇದೆ ಮತ್ತು ಪ್ರೀತಿಯಿಂದ ಜೀವವೇ ಹೋದ ಘಟನೆಗಳು ಈಗಲೂ ನಡೆಯುತ್ತಿದೆ. ಇನ್ನು ಪ್ರೀತಿಸಿ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನೇ ಕೊಲೆ ಮಾಡಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಆಕೆಗಿನ್ನು ವಯಸ್ಸು 18. ಜೀವನದಲ್ಲಿ ಬಾಳಿ ಬದುಕಿ ಸುಂದರ ಕ್ಷಣಗಳನ್ನು ಅನುಭವಿಸಬೇಕಿದ್ದ ಅವಳು ಇಂದು ಹೆಣವಾಗಿ ಹೋಗಿದ್ದಾಳೆ. ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಮುಗ್ದ ಜೀವ ದುರಂತ ಅಂತ್ಯ ಕಂಡಿದೆ.
ನಿನ್ನೆ ಮಧ್ಯಾಹ್ನ ಪುತ್ತೂರು ಮಹಿಳಾ ಪೋಲಿಸ್ ಠಾಣೆ ಪಕ್ಕದಲ್ಲೇ ಕಂಡುಬಂದ ಭೀಕರ ದೃಶ್ಯ ಇದು. ರಕ್ತದ ಮಡುವಿನಲ್ಲಿ ಬಿದ್ದಿರುವ ಯುವತಿ, ಸಂತ್ರಸ್ಥೆಯ ಜೀವ ಉಳಿಸಲು ಆಕೆಯನ್ನು ಅಂಬುಲೆನ್ಸ್ಗೆ ಶಿಫ್ಟ್ ಮಾಡುತ್ತಿರುವ ಸ್ಥಳೀಯರು, ಆದ್ರೆ ಕೀಚಕನ ಹುಚ್ಚು ಪ್ರೇಮಕ್ಕೆ ಆಕೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಉಸಿರು ಚೆಲ್ಲಿದ್ದಾಳೆ.

ಹೌದು..ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗದಲ್ಲಿರುವ ಪುತ್ತೂರಿನಲ್ಲಿ. ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ ಎಂಬ ಯುವತಿ ನಿನ್ನೆ ಕೂಡಾ ಕೆಲಸಕ್ಕೆಂದು ಬಂದಿದ್ದಳು. ಈ ನಡುವೆ ಈಕೆಯನ್ನು ನಗರದ ಬಸ್ ನಿಲ್ದಾಣದ ಬಳಿ ನಾಲ್ಕು ವರ್ಷದಿಂದ ಪರಿಚಿತನಾಗಿರುವ ಪದ್ಮರಾಜ್ ಎಂಬ ಯುವಕ ಭೇಟಿಯಾಗಿದ್ದ.
ಈ ಸಂದರ್ಭ ಇವರಿಬ್ಬರ ನಡುವೆ ವಿಚಾರವೊಂದಕ್ಕೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಯುವತಿ ಈ ಬಗ್ಗೆ ದೂರು ನೀಡಲೆಂದು ಪುತ್ತೂರು ಮಹಿಳಾ ಠಾಣೆ ಬಳಿ ಬಂದಿದ್ದಾಳೆ. ಆದ್ರೆ ಈಕೆಯನ್ನು ಬೆನ್ನತ್ತಿ ಬಂದ ಆರೋಪಿ ಪದ್ಮರಾಜ್ ಠಾಣೆಯ ಹೊರ ಭಾಗದಲ್ಲೇ ಚೂರಿಯಿಂದ ಗೌರಿಯ ಕುತ್ತಿಗೆಯ ಭಾಗಕ್ಕೆ ನಾಲ್ಕು ಬಾರಿ ಇರಿದು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ವಿಚಾರ ತಿಳಿದ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಪದ್ಮರಾಜ್ ಮತ್ತು ಗೌರಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದ್ರೆ ಇತ್ತೀಚೆಗೆ ಇವರಿಬ್ಬರ ನಡುವೆ ಗಲಾಟೆಗಳು ನಡೆಯುತ್ತಿತ್ತು. ಈ ವಿಚಾರದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದ್ರೆ ನಿನ್ನೆ ಮತ್ತೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಬೈಕ್ನ ಆಧಾರದಲ್ಲಿ ಆರೋಪಿಯ ಪೂರ್ವಾಪರ ವಿಚಾರಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಸ್.ಪಿ ಮೇಲ್ನೋಟಕ್ಕೆ ಪ್ರೇಮದ ವಿಚಾರದಲ್ಲಿ ಈ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಪ್ರಾರಂಭದಲ್ಲಿ ಯುವತಿಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಆಗಿದ್ದರಿಂದ ಯುವತಿಯನ್ನು ಬದುಕಿಸಲು ಯಾರಿಗೂ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಹುಚ್ಚು ಪ್ರೇಮಕ್ಕಾಗಿ ಈ ಕೊಲೆ ನಡೆದಿದೆಯೋ ಅಥವಾ ಇದರ ಹಿಂದೆ ಇನ್ನೇನಾದರೂ ಕಾರಣ ಇದೆಯೋ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಬೇಕಿದೆ.