ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ₹ 2000 ಧನಸಹಾಯ: ಕಾಂಗ್ರೆಸ್ನ ‘ಗೃಹಲಕ್ಷ್ಮಿ’ಗೆ ರಾಜ್ಯ ಸರ್ಕಾರ ಕೌಂಟರ್
- ಸರ್ಕಾರಿ ಸೇವೆಗಳು
- January 18, 2023
- No Comment
- 229
ನ್ಯೂಸ್ಆ್ಯರೋ: ಕಾಂಗ್ರೆಸ್ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಮನೆಯ ಯಜಮಾನಿಗೆ ತಿಂಗಳಿಗೆ ₹ 2000 ಧನಸಹಾಯ ನೀಡುವ ಚುನಾವಣಾ ಭರವಸೆ ನೀಡುತ್ತಿದ್ದಂತೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೆ ಪ್ರತಿಯಾಗಿ ಯೋಜನೆಯೊಂದನ್ನು ಘೋಷಿಸಲು ಮುಂದಾಗಿದೆ.
ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ ₹ 2000 ನೆರವು ನೀಡಲು ನಿರ್ಧರಿಸಲಾಗಿದ್ದು, ಮುಂದಿನ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಘೋಷಿಸಿದರು.
ತಾಲ್ಲೂಕಿನ ಮಾಚನಾಳ ತಾಂಡಾದಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ತಾವು ಅಧಿಕಾರಕ್ಕೆ ಬಂದರೆ ಮಾಸಿಕ ₹ 2000 ನೀಡುವುದಾಗಿ ಹೇಳಿದ್ದಾರೆ. ಆದರೆ, ಅವರು ಅಧಿಕಾರಕ್ಕೆ ಬರುವುದಿಲ್ಲ. ಆದರೆ, ನಾವು ತಕ್ಷಣವೇ ಶುರು ಮಾಡಲಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದರು.
ಕಳೆದ 75 ವರ್ಷಗಳಿಂದ ಆಗದ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ್ದು, ದಾಖಲೆಯೇ ಇಲ್ಲದ ತಾಂಡಾಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅಲೆಮಾರಿಗಳಿಗೆ ನೆಲೆ ನೀಡುವ ಕೆಲಸ ಮಾಡಿದ್ದೇವೆ. ಆ ಮೂಲಕ ಒಂದು ಉದಾತ್ತ ಕೆಲಸ ಮಾಡಿದ ಹೆಮ್ಮೆ ಇದೆ ಎಂದು ಸಚಿವ ಅಶೋಕ ಹೇಳಿದರು.
ನಾವು ಸೇವಕರು: ಎಐಸಿಸಿ ಪ್ರಧಾನ ಕಾರ್ಯದರ್ಸಿ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಿದ್ದ ‘ನಾ ನಾಯಕಿ’ ಕಾರ್ಯಕ್ರಮವನ್ನು ಲೇವಡಿ ಮಾಡಿದ ಅವರು, ನಾ ನಾಯಕ, ನಾ ನಾಯಕಿ ಎಂದು ನಾವು ಹೇಳುವುದಿಲ್ಲ. ಬದಲಾಗಿ ಪ್ರಧಾನಿ ಮೋದಿ ಅವರೇ ಹೇಳಿದಂತೆ ‘ನಾವೆಲ್ಲ ಸೇವಕರು’ ಎಂದು ತಿರುಗೇಟು ನೀಡಿದರು.
ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಇದ್ದರು.