ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳ ಬಿಡುಗಡೆ ಅಬ್ಬರ ಜೋರು – ಇಂದು ಬರೋಬ್ಬರಿ 11 ಕನ್ನಡ ಸಿನಿಮಾ ತೆರೆಗೆ
- ಮನರಂಜನೆ
- February 24, 2023
- No Comment
- 161
ನ್ಯೂಸ್ ಆ್ಯರೋ : ಕನ್ನಡ ಚಿತ್ರರಂಗದಲ್ಲಿ ಇಂದು ಬರೋಬ್ಬರಿ 11 ಸಿನಿಮಾಗಳು ತೆರೆಗೆ ಬಂದಿದ್ದು, ಈ ವಾರ ಸಿನಿ ಸುಗ್ಗಿಯಾಗಿದೆ. ವೀಕೆಂಡ್ನಲ್ಲಿ ಸಿನಿಮಾ ನೋಡಲು ಬಯಸುವವರಿಗೆ ಹಲವಾರು ಆಯ್ಕೆಗಳಿದ್ದು, ಪ್ರೇಕ್ಷಕರು ಯಾರನ್ನೂ ಮೆಚ್ಚಿಕೊಳ್ಳುತ್ತಾರೆಂದು ಕಾದು ನೋಡಬೇಕಿದೆ.
ಇನ್ನು ಯಾವೆಲ್ಲ ಸಿನಿಮಾ ತೆರೆಗೆ ಬಂದಿದೆ. ಇಲ್ಲಿದೆ 11 ಸಿನಿಮಾಗಳ ಲಿಸ್ಟ್:
- 1975: ಈ ಚಿತ್ರವನ್ನು ಸಿಲ್ವರ್ ಸ್ಕ್ರೀನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ದಿನೇಶ್ ರಾಜನ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ವಸಿಷ್ಠ ಬಂಟನೂರು ನಿರ್ದೇಶಿಸಿದ್ಧಾರೆ. ಈ ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ತಂದೆ ಮಗಳ ಅನುಬಂಧ, ಫುಡ್ ಡೆಲಿವರಿ ಬಾಯ್ ನೋವಿನ ಕಥೆ, ಕಾಲೇಜ್ ಲವ್ ಸ್ಟೋರಿ ಎಲ್ಲಾ ಅಂಶಗಳಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಕ್ರವರ್ತಿ ಚಂದ್ರಚೂಡ್, ವೆಂಕಟೇಶ್ ಪ್ರಸಾದ್, ಭೂಷಣ್ ಗೌಡ, ಮುರಳಿ, ಉಮೇಶ್, ಮಧು, ಸಿಂಧು ಲೋಕನಾಥ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
2.ಆರ್ಟಿಕಲ್ 370: ಗಡಿ ಕಾಯುವ ಯೋಧ ಹಾಗೂ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಕಾಯ್ದೆ ಜಾರಿಯಾದ ನಂತರ ಮತ್ತು ಅದು ರದ್ದು ಆದ ನಂತರ ನಡೆಯುವ ಘಟನೆಗಳ ಕಥೆ ಇರುವ ಚಿತ್ರ ಆರ್ಟಿಕಲ್ 370. ಚಿತ್ರವನ್ನು ಕೆ. ಶಂಕರ್ ನಿರ್ದೇಶಿಸಿದ್ದು ಭರತ್ ಗೌಡ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಹಿರಿಯನಟ ಶಶಿಕುಮಾರ್ ಮಿಲಿಟರಿ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಅವರ ಪತ್ನಿಯಾಗಿ ಶ್ರುತಿ ಕಾಣಿಸಿಕೊಂಡಿದ್ದಾರೆ.
3.ಅಂತರಂಗ: ಲಕ್ಷ್ಮೀ ನಾರಾಯಣ ರಾಜು ಅರಸ್ ನಿರ್ಮಾಣದ ಅಂತರಂಗ ಸಿನಿಮಾ ಬಿಡುಗಡೆಗೊಂಡಿದೆ. ವಿಜಯ್ ಸೂರ್ಯ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಾಸ್ತಿ ಚಿತ್ರೀಕರಣದ ಸಮಯದಲ್ಲಿ ನಿಧನರಾದ ರಾಘವ್ ಉದಯ್ ನಟಿಸಿದ್ದಾರೆ. ಇದು ಅವರು ನಟಿಸಿರುವ ಕೊನೆಯ ಸಿನಿಮಾ.
4.ಅಸ್ಥಿರ : ತ್ರಿಕೋನ ಪ್ರೇಮ ಕಥೆ, ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಝೋನರ್ನ ಅಸ್ಥಿರನೂ ತೆರೆಗೆ ಅಪ್ಪಳಿಸಿದೆ. ಈ ಚಿತ್ರವನ್ನು ಪ್ರಮೋದ್ ಎಸ್.ಆರ್ ಅವರು ನಿರ್ದೇಶಿಸಿದ್ದಾರೆ. ವಿರಾಜ್ ಫಿಲ್ಮ್ ರೆಕಾರ್ಡಿಂಗ್ ಸ್ಟುಡಿಯೋ ಬ್ಯಾನರ್ ಮೂಲಕ ಅನಿಲ್ ಸಿ.ಆರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿ ನಾಯಕನಾಗಿ ಕೂಡಾ ನಟಿಸುತ್ತಿದ್ದಾರೆ.
- ಕ್ಯಾಂಪಸ್ ಕ್ರಾಂತಿ: ಸಂತೋಷ್ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಕನ್ನಡ ಭಾಷೆ–ಸಂಸ್ಕೃತಿಯನ್ನು ಉಳಿಸಲು ನಡೆಸುವ ಹೋರಾಟದ ಕಥೆಯೇ ಕ್ಯಾಂಪಸ್ ಕ್ರಾಂತಿ ಎಂದು ಚಿತ್ರತಂಡ ಹೇಳಿಕೊಂಡಿದೆ.
- ಗೌಳಿ : ಶ್ರೀನಗರ ಕಿಟ್ಟಿ ಅಭಿನಯದ ಸಿನಿಮಾ ಗೌಳಿ ಇಂದೇ ಬಿಡುಗಡೆಗೊಂಡಿದೆ. ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ನಟನೆಯ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಕಿಟ್ಟಿಗೆ ಪಾವನಾ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೂರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ರಘು ಸಿಂಗಂ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಚಿತ್ರಕ್ಕೆ ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ರಂಗಾಯಣ ರಘು, ಶರತ್ ಲೋಹಿತಾಶ್ವ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
ಈ ಎಲ್ಲ ಚಿತ್ರಗಳೊಂದಿಗೆ ಇಂದು ಹೊಟ್ಟೆ ಪಾಡು, ಜೂಲಿಯಟ್ 2, ಪಾಲಾರ್, ಸಂಭ್ರಮ, ಸೌತ್ ಇಂಡಿಯನ್ ಹೀರೋ ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಿಡುಗಡೆಯಾದ 11 ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆಂದು ಕಾದು ನೋಡಬೇಕಿದೆ.