ಅಭಿಮಾನದಿಂದ ಪ್ರೀತಿಯನ್ನು ತೋರಿ, ದ್ವೇಷ ಅಗೌರವವನ್ನಲ್ಲ – ನಟ ದರ್ಶನ್ ಮೇಲಿನ ಕೃತ್ಯ ಮನಸ್ಸಿಗೆ ನೋವಾಗಿದೆ ಎಂದ ಶಿವರಾಜ್ ಕುಮಾರ್
- ಮನರಂಜನೆ
- December 20, 2022
- No Comment
- 2512
ನ್ಯೂಸ್ ಆ್ಯರೋ : ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ಮನಸ್ಸಿಗೆ ನೋವುಂಟು ಮಾಡಿದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ನಟ ಶಿವರಾಜ್ ಕುಮಾರ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ ನಟ ದರ್ಶನ್ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ.
ಈ ಘಟನೆಯನ್ನು ಕನ್ನಡ ಚಿತ್ರರಂಗದ ನಟ– ನಟಿಯರು ಖಂಡಿಸಿದ್ದರು. ನಟರಾದ ಪ್ರೇಮ್, ಶರಣ್, ಲೂಸ್ ಮಾದ ಯೋಗಿ, ಅಭಿಷೇಕ್ ಅಂಬರೀಶ, ಪ್ರಜ್ವಲ್ ದೇವರಾಜ್, ನಟಿ ಅಮೂಲ್ಯ ಸೇರಿದಂತೆ ಸಾಕಷ್ಟು ನಟ ನಟಿಯರು ಈ ಘಟನೆಯನ್ನು ಖಂಡಿಸಿದ್ದರು.
ಈ ಸಂಬಂಧ ಟ್ವೀಟ್ ಮಾಡಿದ ನಟ ಶಿವರಾಜ್ಕುಮಾರ್, ‘ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ, ದ್ವೇಷ ಅಗೌರವವನ್ನಲ್ಲ’ ಎಂದು ನಟ ಶಿವರಾಜ್ಕುಮಾರ್ ಟ್ವೀಟ್ ಮಾಡಿ ವಿನಂತಿಸಿಕೊಂಡಿದ್ದಾರೆ.