ಕಾಂತಾರ–2 ಚಿತ್ರಕ್ಕೆ ದೈವದ ಮೊರೆ ಹೋದ ರಿಷಭ್ ಶೆಟ್ಟಿ – ಷರತ್ತಿನೊಂದಿಗೆ ಅಭಯ ನೀಡಿದ ಅಣ್ಣಪ್ಪ ಪಂಜುರ್ಲಿ ಹೇಳಿದ್ದೇನು?
- ಮನರಂಜನೆ
- December 10, 2022
- No Comment
- 650
ನ್ಯೂಸ್ ಆ್ಯರೋ : ದೈವಾರಾಧನೆಗೆ ಸಂಬಂಧಿಸಿದ ಚಿತ್ರಕಥೆಯ ‘ಕಾಂತಾರ’ ಸಿನಿಮಾ ಸೂಪರ್ಹಿಟ್ ಆಗುತ್ತಿದ್ದಂತೆ ಕಾಂತಾರ–2 ಸಿನಿಮಾ ಬರುತ್ತಾ ಎಂಬ ಪ್ರಶ್ನೆ ಸಿನಿ ರಸಿಕರಿಂದ ಕೇಳಿಬಂದಿತ್ತು. ಆ ಪ್ರಶ್ನೆಗೆ ಉತ್ತರ ಸಿಗುವ ಕಾಲ ಹತ್ತಿರಬಂದಿದೆ. ಇದೀಗ ಚಿತ್ರತಂಡವು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಪಂಜುರ್ಲಿ ದೈವದ ಬಳಿಯೇ ಅನುಮತಿಯನ್ನು ಕೇಳಲಾಗಿದೆ.
ಹೊಂಬಾಳೆ ಫಿಲಮ್ಸ್ನಲ್ಲಿ ಮೂಡಿಬಂದ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ತಂದುಕೊಟ್ಟಿತ್ತು. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿತ್ತು. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗಿನಲ್ಲೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎಂಬ ಮಾತು ರಿಷಭ್ ಶೆಟ್ಟಿ ಅವರಿಂದಲೇ ವ್ಯಕ್ತವಾಗಿತ್ತು.
ದೈವ–ದೇವರನ್ನು ಅಪಾರವಾಗಿ ನಂಬುವ ರಿಷಭ್ ಶೆಟ್ಟಿ ಅವರು ಸಿನಿಮಾ ಮಾಡುವಾದ ಭಯ–ಭಕ್ತಿಯಿಂದ ಸಂಪ್ರದಾಯಕ್ಕೆ ಅಪಚಾರವಾಗದಂತೆ ನಡೆದುಕೊಂಡಿದ್ದರು. ದೈವದ ಆಶೀರ್ವಾದ ಸಿನಿಮಾಕ್ಕೆ ಧಕ್ಕಿ, ದೊಡ್ಡ ಹಿಟ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಇದೀಗ ಕಾಂತಾರ–2 ಸಿನಿಮಾದ ಮಾತುಕತೆ ಶುರುವಾಗಿದ್ದು, ಕಾಂತಾರದ ಮುಂದುವರಿದ ಭಾಗವಾಗಿ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ಪಂಜುರ್ಲಿ ದೈವದ ಅನುಮತಿಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದೆ.
ಮಂಗಳೂರು ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ದೈವದ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಅವರು ದೈವದ ಬಳಿ ಕಾಂತಾರ–2 ನಿರ್ಮಾಣಕ್ಕೆ ಅನುಮತಿ ಕೇಳಿದ್ದಾರೆ.
ಕೆಲವು ಷರತ್ತು ಮತ್ತು ಎಚ್ಚರಿಕೆಯೊಂದಿಗೆ ಕಾಂತಾರ–2 ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ‘ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ನೋಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ’ ಎಂದು ಅಣ್ಣಪ್ಪ ಪಂಜುರ್ಲಿ ದೈವವು ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.
ಹೊಂಬಾಳೆ ಪ್ರೊಡಕ್ಷನ್ ನ ವಿಜಯ್ ಕಿರಂಗದೂರು, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ, ನವೀಬ್ ಬೋಂದೆಲ್, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ರಿಷಬ್ ಕುಟುಂಬಸ್ಥರು, ಕಾಂತಾರ ಚಿತ್ರ ತಂಡದ ಕಲಾವಿದರು ಕೋಲದಲ್ಲಿ ಭಾಗವಹಿಸಿದ್ದಾರೆ. ಇದಕ್ಕೂ ಮುನ್ನ ರಿಷಬ್ ಶೆಟ್ಟಿ ದಂಪತಿ ಹಾಗೂ ವಿಜಯ್ ಕಿರಂಗದೂರು ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ದೈವದಿಂದ ಅನುಮತಿ ದೊರೆತೊಡನೆ ರಿಷಬ್ ಶೆಟ್ಟಿ ತಂಡವು ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಮಾಡಿಕೊಂಡಿದ್ದ ಯೋಜನೆಯನ್ನು ಜಾರಿಗೊಳಿಸಲು ಆರಂಭಿಸಿದೆ. ಚಿತ್ರದಲ್ಲಿ ನಟಿಸುವ ಕೆಲ ಕಲಾವಿದರಿಗೆ ಉದ್ದ ಕೂದಲು ಬಿಡಲು ಸೂಚಿಸಿದ್ದಾರೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರ–2 ಚಿತ್ರದ ಚಿತ್ರೀಕರಣ ವಾಗುವ ಸಾಧ್ಯತೆಗಳಿವೆ.