
ಭಾರೀ ಮಳೆಗೆ ಮುಳುಗಡೆಯಾದ ನಟ ಜಗ್ಗೇಶ್ ಅವರ ಬಿಎಂಡಬ್ಲ್ಯು ಕಾರು; ಟ್ವೀಟರ್ ನಲ್ಲಿ ಕಮೆಂಟ್ಗಳ ಮಹಾಪೂರ
- ಮನರಂಜನೆ
- May 22, 2023
- No Comment
- 172
ನ್ಯೂಸ್ ಆ್ಯರೋ : ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಆಲಿಕಲ್ಲು, ಗಾಳಿ ಸಹಿತ ಭಾರೀ ಮಳೆ ಸುರಿದು ಅನೇಕ ಅವಾಂತರ ಸೃಷ್ಟಿಯಾಗಿದೆ. ಈ ಪೈಕಿ ರಾಜ್ಯಸಭಾ ಸದಸ್ಯ, ಹಿರಿಯ ನಟ ಜಗ್ಗೇಶ್ ಅವರ ದುಬಾರಿ ಕಾರು ಮುಳುಗಡೆಯಾಗಿದೆ.
“ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ ಬಿಎಂಡಬ್ಲ್ಯು 5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. 5 ಎಚ್.ಪಿ. ಮೋಟರ್ ಬಳಸಿ ನೀರು ಹೊರಹಾಕಿಸಲಾಯಿತು. ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ” ಎಂದು ಜಗ್ಗೇಶ್ ಟ್ವೀಟರ್ ನಲ್ಲಿ ಬರೆದುಕೊಂಡು ಫೋಟೋ, ವೀಡಿಯೋ ಹಂಚಿಕೊಂಡಿದ್ದಾರೆ.
ತಹೇವಾರಿ ಕಮೆಂಟ್ ಗಳು
ಜಗ್ಗೇಶ್ ಈ ವಿಷಯವನ್ನು ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸಹತಾಪ ಸೂಚಿಸಿದರೆ ಇನ್ನು ಹಲವರು ಟೀಕಿಸಿದ್ದಾರೆ. ”ಆಹಾ ಎಂತಹಾ ಅದ್ಭುತ! ಈ ತರಹದ ವಿಷಯವನ್ನೆಲ್ಲ ಟ್ವೀಟ್ ಮಾಡ್ತಾರ ಗುರುವೇ. ದಯವಿಟ್ಟು ನಿಮ್ಮ ಟ್ವಿಟರ್ ಖಾತೆ ನಿರ್ವಹಿಸುತ್ತಿರುವ ಹುಡುಗನಿಗೆ ದಯವಿಟ್ಟು ಪ್ರಭುದ್ಧತೆಯನ್ನ ಕಲಿಸಿ ಜಗ್ಗೇಶ್ ಸರ್” ಎಂದು ಒಬ್ಬರು ಹೇಳಿದರೆ ”ಈ ರೀತಿಯಾಗಿರುವುದು ಸಾಮಾನ್ಯ ಜನಗಳದು ಕೂಡ. ಎಲ್ಲರಿಗೂ ತುಂಬಾ ತೊಂದರೆ ಆಗಿದೆ. ಅದನ್ನ ತಾವು ರಾಜಕಾರಣಿಯಾಗಿ ಒಂದು ಸಿನಿಮಾ ನಟರಾಗಿ ಇದನ್ನು ಹೇಗೆ ತಪ್ಪಿಸಬೇಕು ಎಂಬುದರ ಬಗ್ಗೆ ಯೋಚಿಸಿ. ಎಲ್ಲರಿಗೂ ಒಳ್ಳೆಯ ರೀತಿ ಆಗುವ ಹಾಗೆ ಮಾಡಿ. ಆಗ ಇದು ಸರಿಯಾಗುತ್ತದೆ. ಅದು ಬಿಟ್ಟು ಈ ರೀತಿ ಪೋಸ್ಟ್ ಹಾಕಿಕೊಂಡು ಪೋಸ್ ಕೊಟ್ಟರೆ ಪ್ರಯೋಜನ ಇಲ್ಲ” ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ”ಸರ್, ಮಳೆಗೆ ಬಿಎಂಡಬ್ಲ್ಯು, ಮಾರುತಿ 800 ವ್ಯತ್ಯಾಸ ಗೊತ್ತಾಗಲ್ಲ” ಎಂದು ಮಗದೊಬ್ಬರು ಹೇಳಿದ್ದಾರೆ. ”ಕಾರು ಎಂದಿದ್ಧರೆ ಸಾಕಿತ್ತು, ಬ್ರ್ಯಾಂಡ್ ಹೇಳುವ ಅಗತ್ಯವಿರಲಿಲ್ಲ” ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.
ಇನ್ನು ಕೆಲವರು ನಟನ ನೆರವಿಗೆ ಬಂದಿದ್ದು, ”ಅಂದದ ಬೆಂಗಳೂರಿನ ಅವ್ಯವಸ್ಥೆಯ ಆಗರ. ಇನ್ನಾದರೂ ಯಾರು ನೈಜ ಕಾಳಜಿಯವರು ಶಾಸಕಾಂಗ/ ಕಾರ್ಯಾಂಗದಲ್ಲಿ ಇರುವರೇ??????” ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ”ರಾಯರಿದ್ದಾರೆ ಹೆದರಬೇಡಿ ಸರ್” ಎಂದು ಧೈರ್ಯ ತುಂಬಿದ್ದಾರೆ. ರಾಘವೇಂದ್ರ ಮಂತ್ರ ಹೇಳಿ ಮತ್ತೊಬ್ಬರು ಸಾಂತ್ವನ ಹೇಳಿದ್ದಾರೆ.