ಈ ವರ್ಷ ನಡೆಯೋದಿಲ್ಲ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ – ಸಿ.ಎಂ. ಬೊಮ್ಮಾಯಿ ಘೋಷಣೆ ಸುಳ್ಳಾಯ್ತಾ…!?
- ಮನರಂಜನೆ
- January 28, 2023
- No Comment
- 111
ನ್ಯೂಸ್ ಆ್ಯರೋ : ಬೆಂಗಳೂರಿನಲ್ಲಿ ಈ ವರ್ಷ ನಡೆಯಲಿದೆ ಎನ್ನಲಾಗಿದ್ದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕಾಗಿ ಸಿನಿ ಪ್ರೇಮಿಳು ಕಾದು ಕುಳಿತಿದ್ದರು, ಆದರೆ ಈ ಬಾರಿ ಚಿತ್ರೋತ್ಸವ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಕನ್ನಡದ ಮೊದಲ ಟಾಕಿ ಚಿತ್ರ ‘ಸತಿ ಸುಲೋಚನ’ ಸಿನಿಮಾ ಮಾ.3 ರಂದು ಬಿಡುಗಡೆಯಾಗಿತ್ತು. ಆದ್ದರಿಂದ ಅದೇ ದಿನಾಂಕವನ್ನು ‘ಅಂತರಾಷ್ಟ್ರೀಯ ಕನ್ನಡ ಚಲನಚಿತ್ರ ದಿನ’ ಎಂದು ಘೋಷಿಸಿ ಅಂದು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ನಡೆಯಲಿದೆ ಎಂದು ಸಿ.ಎಂ.ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದರು. ಆದರೆ ಈ ಚಿತ್ರೋತ್ಸವ ನಡೆಯುವುದೇ ಅನುಮಾನ ಎಂಬಂತಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿ ಮಾತನಾಡಿದ, ಮುಖ್ಯಮಂತ್ರಿಗಳು, ‘ಮುಂಬರುವ ಮಾ.3 ರಿಂದ ಬೆಂಗಳೂರು ಚಿತ್ರೋತ್ಸವ ಉದ್ಘಾಟನೆಯಾಗಲಿದೆ’ ಎಂದಿದ್ದರು. ಆದರೆ ಅದು ಜಾರಿಗೆ ಬರುವುದು ಅನುಮಾನ ಎಂಬಂತಾಗಿದೆ. ಏಕೆಂದರೆ, ಚಿತ್ರೋತ್ಸವಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಇನ್ನೂ ಬಿಡುಗಡೆಗೊಳಿಸಿಲ್ಲ.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹೇಳಿದ್ದೇನು?
ಈ ಬಾರಿ ನಡೆಯಬೇಕಿದ್ದ ಬೆಂಗಳೂರು ಚಿತ್ರೋತ್ಸವದ ಬಗ್ಗೆ, ಚಲನಚಿತ್ರ ಮಂಡಳಿ ಅಧ್ಯಕ್ಷ ಅಶೋಕ್ ಕಶ್ಯಪ್ ಮಾತನಾಡಿ, ‘ನಾನು ಅಕಾಡೆಮಿ ಅಧ್ಯಕ್ಷನಾಗಿ ಎರಡು ತಿಂಗಳು ಕಳೆದಿದೆ. ಅಷ್ಟರಲ್ಲೇ ಚಿತ್ರೋತ್ಸವ ಘೋಷಣೆಯಾಯಿತು. ಚಿತ್ರೋತ್ಸವಕ್ಕೆ ಬೇಕಾದ ಅನುದಾನಗಳಿಗಾಗಿ, ಈಗಾಗಲೇ ಫೈಲುಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನೊಂದೆರಡು ದಿನಗಳಲ್ಲಿ ಅನುದಾನ ಬಿಡುಗಡೆಯಾಗಬಹುದು. ಅನಂತರ ಕಲಾತ್ಮಕ ನಿರ್ದೇಶಕ ನರಹರಿ ರಾವ್ ಮತ್ತವರ ತಂಡ ಸಿನಿಮಾಗಳನ್ನು ನೋಡಿ, ಚಿತ್ರೋತ್ಸವಕ್ಕೆ ಆಯ್ಕೆ ನಡೆಸುತ್ತಾರೆ. ಇದಕ್ಕೆಲ್ಲ ಒಂದಷ್ಟು ಸಮಯ ಹಿಡಿಯುವುದರಿಂದ, ಮಾರ್ಚ್ ಮೊದಲ ವಾರದಲ್ಲಿ ಚಿತ್ರೋತ್ಸವ ನಡೆಯುವುದು ಅನುಮಾನ’ ಎಂದಿದ್ದಾರೆ.
ಅನುಷ್ಟಾನಹೀನ ಘೋಷಣೆಗಳು
ಸ್ಯಾಂಡಲ್ ವುಡ್ ವಿಚಾರದಲ್ಲಿ ಸರ್ಕಾರ ಮಾಡುವ ಯಾವ ಘೋಷಣೆಗಳೂ ಕೂಡ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಈ ಹಿಂದೆ, ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನದಂದು ರಾಜ್ಯ ಚನಚಿತ್ರ ಪ್ರಶಸ್ತಿ ನೀಡಲಾಗುತ್ತದೆ ಎಂಬ ಘೋಷಣೆ ಕೇಳಿ ಬಂದಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ. ಸಿನಿಮಾಗಳಿಗೆ ನೀಡುವ ಸಬ್ಸಿಡಿಯ ಬಗ್ಗೆಯೂ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇದೀಗ ಚಿತ್ರೋತ್ಸವವೂ ಕೂಡ ಮೂಲೆ ಗುಂಪಾಗುತ್ತಿದೆ.
ಚಲನಚಿತ್ರ ಅಕಾಡೆಮಿಯಲ್ಲಿ ಲೋಕಾಯುಕ್ತ ತನಿಖೆ
ಚಲನಚಿತ್ರ ಅಕಾಡೆಮಿಯಲ್ಲಿ ಹಣ ದುರ್ಬಳಕೆಯಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದೆ ಎನ್ನಲಾಗಿದೆ. ಕೆಲವು ದಿನಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಚಲನಚಿತ್ರ ಅಕಾಡೆಮಿ ಹಾಗೂ ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಲಿದ್ದಾರಂತೆ. ಆದರೆ ದೂರು ನೀಡಿದವರು ಯಾರು, ಯಾವ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಗೌಪ್ಯವಾಗಿದೆ.